ADVERTISEMENT

ತವರಿನಲ್ಲಿ ಹೆಚ್ಚಿದ ಸಂಭ್ರಮ

ಸಾರ್ವಜನಿಕರಿಗೆ ಆಟೊದಲ್ಲಿ ಉಚಿತ ಪಯಣ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST
ಹಾಸನ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ ಕುಮಾರ್‌ ಸಾರ್ವಜನಿಕರಿಗೆ ಸಿಹಿ ತಿನ್ನಿಸಿದರು
ಹಾಸನ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ ಕುಮಾರ್‌ ಸಾರ್ವಜನಿಕರಿಗೆ ಸಿಹಿ ತಿನ್ನಿಸಿದರು   

ಹಾಸನ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ತವರು ಜಿಲ್ಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.

ಹೊಳೆನರಸೀಪುರ ಪಟ್ಟಣದಲ್ಲಿ ಕಾರ್ಯಕರ್ತರು ಬೈಕ್‌ನಲ್ಲಿ ಪಕ್ಷದ ಬಾವುಟ ಹಿಡಿದು ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಅವರ ಪರ ಘೋಷಣೆ ಕೂಗಿ ಮೆರವಣಿಗೆ ನಡೆಸಿದರು. ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಮಳೆ ಬಾರದಂತೆ ಮನೆಗಳಲ್ಲಿ ದೇವರನ್ನು ಪ್ರಾರ್ಥಿಸಿದರು. ಪದಗ್ರಹಣದ ದೃಶ್ಯವನ್ನು ಕಚೇರಿಗಳಲ್ಲಿ ಮೊಬೈಲ್‌ ಮೂಲಕ ವೀಕ್ಷಿಸುತ್ತಿದ್ದುದು ಕಂಡುಬಂತು. ಹಾಸನದಲ್ಲೂ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಸುಮುಖ ಹೋಟೆಲ್‌ ಬಳಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ADVERTISEMENT

ಕುಮಾರಸ್ವಾಮಿ ಅಭಿಮಾನಿಯಾಗಿರುವ ಆಟೊ ಚಾಲಕ ವೆಂಕಟೇಶ್‌ ಎಂಬುವವರು ನಗರದಲ್ಲಿ ಸಾರ್ವಜನಿಕರನ್ನು ಉಚಿತವಾಗಿ ಕರೆದೊಯ್ದರು. ಇಡೀ ದಿನ ಆಟೊದಲ್ಲಿ ಸಾರ್ವಜನಿಕರಿಗೆ ನಗರ ವ್ಯಾಪ್ತಿಯಲ್ಲಿ ಉಚಿತವಾಗಿ ಪಯಣ ಮಾಡುವ ಅವಕಾಶ ದೊರೆಯಿತು.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಜಿಲ್ಲೆಯ ಮುಖಂಡರು, ಸಾವಿರಾರು ಜೆಡಿಎಸ್‌ ಕಾರ್ಯಕರ್ತರು, ಬೆಂಬಲಿಗರು ಬೆಂಗಳೂರಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.