ADVERTISEMENT

ತಿವಾರಿ ಸಾವು: ಸಿಬಿಐ ತನಿಖೆ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:42 IST
Last Updated 10 ಜೂನ್ 2017, 19:42 IST
ತಿವಾರಿ ಸಾವು: ಸಿಬಿಐ ತನಿಖೆ ಶೀಘ್ರ ಆರಂಭ
ತಿವಾರಿ ಸಾವು: ಸಿಬಿಐ ತನಿಖೆ ಶೀಘ್ರ ಆರಂಭ   

ಲಖನೌ: ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಶೀಘ್ರ ಕೈಗೆತ್ತಿಕೊಳ್ಳಲಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಉತ್ತರ ಪ್ರದೇಶದ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ. ಆದರೆ ಈವರೆಗೆ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿಲ್ಲ. ಹಾಗಾಗಿ ತನಿಖೆ ಆರಂಭಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಹೋಗಲು ತಿವಾರಿ ಕುಟುಂಬದ ಸದಸ್ಯರು ನಿರ್ಧರಿಸಿದ್ದರು.

ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು. ಈ ತಂಡ ಬೆಂಗಳೂರಿನಲ್ಲಿರುವ ತಿವಾರಿ ಅವರ ಮನೆಗೂ 
ಭೇಟಿ ನೀಡಿ ತನಿಖೆ ನಡೆಸಿತ್ತು. ‘ಅತಿಯಾದ ಔಷಧ ಸೇವನೆಯೂ ಸಾವಿಗೆ ಕಾರಣ ಆಗಿರಬಹುದು’ ಎಂಬ ಅನುಮಾನವನ್ನು ಎಸ್‌ಐಟಿ ವ್ಯಕ್ತಪಡಿಸಿತ್ತು.
ಎಸ್‌ಐಟಿ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿವಾರಿ ಕುಟುಂಬದ ಸದಸ್ಯರು ಆರೋಪಿಸಿದ್ದರು.

ADVERTISEMENT

ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾಗಿದ್ದ ತಿವಾರಿ ಅವರ ಮೃತದೇಹ ಲಖನೌದ ಅತಿಥಿ ಗೃಹದ  ಸಮೀಪದ ರಸ್ತೆಯಲ್ಲಿ ಕಳೆದ ತಿಂಗಳು ಪತ್ತೆಯಾಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಹಾಗಾಗಿ ಅವರ ಒಳಾಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪ್ರಕರಣ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ರಾಜಕೀಯ ಆರೋಪ–ಪ್ರತ್ಯಾರೋಪಕ್ಕೂ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.