ADVERTISEMENT

ದಂಗುಬಡಿಸಿದ ‘ಕುಟುಂಬಶ್ರೀ’ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2014, 19:30 IST
Last Updated 21 ಜನವರಿ 2014, 19:30 IST

ಹುಬ್ಬಳ್ಳಿ: ಕೇರಳ ರಾಜ್ಯದಾದ್ಯಂತ 39 ಲಕ್ಷ ಮಹಿಳೆಯರನ್ನು ಆರ್ಥಿಕವಾಗಿ ಸಬಲರ­ನ್ನಾಗಿಸು­ವು­ದರೊಂದಿಗೆ ಸಾಮಾಜಿಕವಾಗಿ ಹಾಗೂ ಕೌಟುಂಬಿಕ ವಲಯದಲ್ಲಿ ಅವರು ಸ್ವಾಭಿ­ಮಾನದ ಜೀವನ ನಡೆಸಲು ನೆರವಾದ ‘ಕುಟುಂಬಶ್ರೀ’ ಯಶೋಗಾಥೆ ನಗರ­ದಲ್ಲಿ ದೇಶಪಾಂಡೆ ಫೌಂಡೇಷನ್‌ ಹಮ್ಮಿಕೊಂಡಿರುವ ಅಭಿವೃದ್ಧಿ ಸಂವಾದ­ದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳಲ್ಲಿ ಅಚ್ಚರಿ ಮೂಡಿಸಿತು.

ಕಾರ್ಯಕ್ರಮದ ಎರಡನೇ ದಿನವಾದ ಮಂಗಳ­ವಾರ ಬೆಳಿಗ್ಗೆ ನಡೆದ ‘ಯೋಜನೆಗಳ ಒಂದು­ಗೂಡಿಸುವಿಕೆ’ ಎಂಬ ಗೋಷ್ಠಿಯಲ್ಲಿ ‘ಕುಟುಂಬಶ್ರೀ’ ಕುರಿತು ಮಾಹಿತಿ ನೀಡಿದ ಯೋಜ­ನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಬಿ. ವತ್ಸಲಾ ಕುಮಾರಿ, ಮಹಿಳಾ ಅಭಿವೃದ್ಧಿ ಕುರಿತ ಗೋಷ್ಠಿ­ಯಲ್ಲಿ ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌ ಮೂಲಕ ಯೋಜನೆಯ ವಿಸ್ತೃತ ಮಾಹಿತಿ ಒದಗಿಸಿದರು.

ಬಡ ಕುಟುಂಬಗಳ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ ‘ಅಯಲ್‌­­ಕೂಟ್ಟಂ’ (ನೆರೆಮನೆ ಸಂಘಗಳು) ಪರಿಕಲ್ಪನೆ ಯಶಸ್ಸು ಕಂಡ ಬಗೆಯನ್ನು ವಿವರಿಸುತ್ತಿದ್ದಂತೆ ಎರಡೂ ಗೋಷ್ಠಿಗಳಲ್ಲಿ ಪ್ರೇಕ್ಷಕರು ಚಪ್ಪಾಳೆಯ ಮಳೆ ಸುರಿಸಿದರು. ‘ಕುಟುಂಬಶ್ರೀ’ ಯೋಜನೆಯ ಫಲಾನುಭವಿಗಳ ಮಕ್ಕಳು ‘ಬಾಲಸಭಾ’ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಇದು ಕೂಡ ರಾಜ್ಯದ ಸಾಮಾಜಿಕ ಬದ­ಲಾ­ವಣೆಯಲ್ಲಿ ಪ್ರಮುಖ ಪಾತ್ರ ವಹಿಸು­ತ್ತಿದೆ ಎಂದು ಅವರು ಹೇಳುತ್ತಿದ್ದಂತೆ ಚಪ್ಪಾಳೆಯ ಸದ್ದು ಇನ್ನಷ್ಟು ಹೆಚ್ಚಾಯಿತು.

‘ಬಡತನವನ್ನು ನೀಗಿಸಲು ಯೂನಿ­ಸೆಫ್‌ ಸಹಯೋಗದಲ್ಲಿ ಆಲಪ್ಪುಳ ಜಿಲ್ಲೆ­ಯಲ್ಲಿ ಹಮ್ಮಿ­ಕೊಂಡ ಈ ಪ್ರಾಯೋಗಿಕ ಯೋಜನೆ ಅತ್ಯಂತ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸ­ಲಾಯಿತು. ಈಗ 39 ಲಕ್ಷ ಬಡ ಮಹಿಳೆಯರು ಇದರ ಸದುಪಯೋಗ ಪಡೆದು­ಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.

ಒಟ್ಟು ಒಂಬತ್ತು ಲಕ್ಷ ಮಂದಿ ಮಕ್ಕಳು ‘ಬಾಲಸಭೆ’ಗಳ ಮೂಲಕ ಗ್ರಾಮಗಳ ಜನರ ಸಮಸ್ಯೆಗಳಿಗೆ ಸ್ಪಂದಿ­ಸುವ ವಿಧಾನವನ್ನು ವಿವರಿ­ಸಿದ ಅವರು, ಬುದ್ಧಿಮಾಂದ್ಯ ಮಕ್ಕಳಿಗಾಗಿ ಕುಟುಂಬಶ್ರೀ ಯೋಜನೆಯ ಮೂಲಕ 55 ಶಾಲೆಗಳನ್ನು ನಡೆಸುತ್ತಿರುವು­ದಾಗಿಯೂ ಬರಡು ಭೂಮಿಯನ್ನು ಭೋಗ್ಯಕ್ಕೆ ಪಡೆದುಕೊಂಡು ಮಹಿಳೆ­ಯರೇ ಕೃಷಿ ಮಾಡುತ್ತಿರು­ವುದಾಗಿಯೂ ತಿಳಿಸಿದರು.

ಕುರಿ ಸಾಕಣೆ, ಹೈನುಗಾರಿಕೆ, ಸಣ್ಣ ಕೈಗಾರಿಕೆ­ಗಳನ್ನು ಸ್ಥಾಪಿಸಿ ಉದ್ಯೋಗಾ­ವಕಾಶ ಒದಗಿಸು­ವುದು ಇತ್ಯಾದಿ ಚಟು­ವಟಿಕೆ ಮಾತ್ರ­ವಲ್ಲದೆ ಯಾವುದೇ ಸಂದರ್ಭ­ದಲ್ಲಿ ಎದುರಾ­ಗುವ ಸಮಸ್ಯೆ­ಗಳನ್ನು ಫಲಾನುಭವಿಗಳೇ ಪರಿಹ­ರಿಸಿ­ಕೊ­ಳ್ಳುವ ಬಗೆಯನ್ನು ಕೂಡ ವಿವರಿಸಿದರು.

‘ಕುಟುಂಬಶ್ರೀ ಮೂಲಕ ಕೇರಳದ ಮಹಿಳೆ­ಯರಿಗೆ ಆರ್ಥಿಕ ಸ್ವಾವಲಂಬನೆ, ಸಮಾಜದಲ್ಲಿ ಗೌರವ ಲಭಿಸಿದೆ. ಅಲ್ಲಿನ ಮಹಿಳೆ­ಯರು ಈಗ ಪರರ ಮನೆಯ ಮುಸುರೆ ತಿಕ್ಕುವುದಕ್ಕಾಗಿ ಪಟ್ಟಣಗಳಿಗೆ ಪ್ರಯಾಣ ಬೆಳೆಸು­ವುದಿಲ್ಲ. ಅವರ ಅನುಭವ ಕಥನಗಳು ಪ್ರತಿ ಹಳ್ಳಿಯಲ್ಲಿ ಸಿದ್ಧ­ವಾಗು­ತ್ತಿದ್ದು ಅದರ ಪೈಕಿ ಉತ್ತಮ­ವಾದುದನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸ­ಲಾ­ಗು­­ವುದು’ ಎಂದು ವತ್ಸಲಾ ಕುಮಾರಿ ವಿವರಿಸಿದರು.

‘ಕುಟುಂಬ ಶ್ರೀ ಯೋಜನೆ ವಿವಿಧ ರಾಜ್ಯಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳನ್ನು ಸ್ಥಾಪಿ­ಸಲು ಮುಂದಾ­ಗಿದ್ದು ಕರ್ನಾಟಕ ಸೇರಿ­ದಂತೆ ಐದು ರಾಜ್ಯಗಳ ಜೊತೆಗೆ ಒಡಂಬಡಿಕೆ ಮಾಡಿ­ಕೊಳ್ಳಲಾಗಿದೆ. ಈ ರಾಜ್ಯಗಳು ಸೇರಿದಂತೆ ಒಟ್ಟು ಹತ್ತು ರಾಜ್ಯಗಳಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆ ಇದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.