ಗುಲ್ಬರ್ಗ: ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ, ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 28ನೇ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಯುವಜನೋತ್ಸವ `ಗುಲ್ಫೆಸ್ಟ್-2012' ಶನಿವಾರ ಆರಂಭವಾಯಿತು.
ಡಿ.19ರವರೆಗೆ ನಡೆಯುವ ಈ ಯುವಜನೋತ್ಸವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಒಟ್ಟು 22 ವಿಶ್ವವಿದ್ಯಾಲಯಗಳ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.ಗುಲ್ಬರ್ಗ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ 15 ವರ್ಷಗಳ ತರುವಾಯ ನಡೆಯುತ್ತಿರುವ ಈ ಯುವಜನೋತ್ಸವವನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ಎನ್. ಹೆಗಡೆ ಡೋಲು ಬಾರಿಸಿ ಉದ್ಘಾಟಿಸಿದರು.
ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಉಪ ಕಾರ್ಯದರ್ಶಿ ಸ್ಯಾಂಪ್ಸನ್ ಡೇವಿಡ್ ಮುಖ್ಯ ಅತಿಥಿಯಾಗಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಮಧ್ಯಾಹ್ನ 2.30ಕ್ಕೆ ವಿವಿಧ ವಾದ್ಯ, ಮೇಳ, ವೇಷಭೂಷಣದ ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆ ಒಳಾಂಗಣ ಕ್ರೀಡಾಂಗಣ ತಲುಪಿ ಸಮಾವೇಶಗೊಂಡಿತು.
ಮೆರವಣಿಗೆಯ ದಾರಿಯಲ್ಲಿ ಮರದಲ್ಲಿದ್ದ ಹೆಜ್ಜೇನುಗಳು ಗೂಡಿನಿಂದ ಹೊರಬಂದು ಕಚ್ಚಿದ್ದರಿಂದ ವಿದ್ಯಾರ್ಥಿಗಳು ಕೆಲಕಾಲ ಗೊಂದಲಕ್ಕೆ ಗುರಿಯಾದರು.ಮೆರವಣಿಗೆಯ ನಂತರ ಬಳಿಕ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಭಾನುವಾರದಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, 19ರಂದು ಸಮಾರೋಪಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.