ADVERTISEMENT

ದಾವಣಗೆರೆ: ಘರ್ಷಣೆ,ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2010, 6:15 IST
Last Updated 25 ಡಿಸೆಂಬರ್ 2010, 6:15 IST

ದಾವಣಗೆರೆ:  ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಯುವಕರ ಮಧ್ಯೆ ಘರ್ಷಣೆ ನಡೆದು ಕಲ್ಲುತೂರಾಟ, ವಾಹನಗಳಿಗೆ ಬೆಂಕಿ, ಲಾಠಿ ಪ್ರಹಾರ ಜರುಗಿ 14ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶುಕ್ರವಾರ ವಿನೋಬನಗರದಲ್ಲಿ ನಡೆದಿದೆ.

ಮಧ್ಯಾಹ್ನ 2ಕ್ಕೆ ಆರಂಭವಾದ ಘರ್ಷಣೆ ರಾತ್ರಿವರೆಗೂ ಮುಂದುವರಿದಿದೆ. ಅನೇಕ ಮನೆಗಳ ಮೇಲೆ ಕಲ್ಲುತೂರಾಟ ನಡೆದಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ.

ನಿಷೇಧಾಜ್ಞೆ ಜಾರಿ: ಹೆಚ್ಚುವರಿ ಎಸ್‌ಪಿ ಅನುಪಮ್ ಅಗರ್‌ವಾಲ್ ಅವರ ಜೀಪಿನ ಮೇಲೂ ಕಲ್ಲು ತೂರಾಟ ನಡೆದಿದೆ. ವಿನೋಬನಗರ ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿಯಾಗಿದೆ.

ಘಟನೆ ವಿವರ: ವಿನೋಬನಗರ ಎರಡನೇ ಮುಖ್ಯರಸ್ತೆಯ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ಯುವಕರು ಇನ್ನೊಂದು ಕೋಮಿನ ಯುವಕರ ಮೇಲೆ ಹಲ್ಲೆ ನಡೆಸಿದರು ಎಂಬ ಸುದ್ದಿ ಹರಡಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಇನ್ನೊಂದು ಕೋಮಿನ ಸಂಘಟನೆಯ ಯುವಕರು ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದರು.

ಎರಡೂ ಕಡೆಯ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಲ್ಲೆಗೆ ಮುಂದಾದರು. ಭಾರೀ ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಸಿದ್ಧಿವಿನಾಯಕ ದೇವಸ್ಥಾನದ ಬಳಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಬಳಸಲು ಸಿದ್ಧರಾದರು. ಈ ವೇಳೆಗೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತು.

ಘಟನೆಯಲ್ಲಿ ಅದೇ ಗುಂಪಿನಲ್ಲಿದ್ದ ಯುವಕನಿಗೆ ಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಹರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೂ ಕಲ್ಲು ತೂರಾಟ ನಡೆದಿದೆ. ಸ್ಕೂಟರ್,ಆಟೋಗಳಿಗೆ ಬೆಂಕಿ ಹಚ್ಚಲಾಗಿದೆ.
ವಿನೋಬನಗರದ ಮನೆಗಳ ಕಿಟಕಿ ಗಾಜುಗಳು ಒಡೆದಿವೆ. ಈ ಪ್ರದೇಶದ ಅಂಗಡಿ-ಮುಂಗಟ್ಟು ಮುಚ್ಚಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.