ಕಾರವಾರ: `ಬೆಟ್ಟದ ಮೇಲಿಂದ ರಭಸವಾಗಿ ಹರಿಯುತ್ತಿದ್ದ ನೀರು ಮಿಶ್ರಿತ ಮಣ್ಣಿನಲ್ಲಿ ಯಾತ್ರಾರ್ಥಿಗಳು ನಮ್ಮ ಕಣ್ಣೆದುರೇ ಹೂತುಹೋದರು. ಸಾಕಷ್ಟು ಯಾತ್ರಾರ್ಥಿಗಳನ್ನು ನಾವು ರಕ್ಷಣೆ ಮಾಡಿದೆವು. ಪ್ರವಾಹದ ರುದ್ರನರ್ತನ ಹೆಚ್ಚಾಗುತ್ತಿರುವುದನ್ನು ಅರಿತು ಜೀವ ರಕ್ಷಣೆಗಾಗಿ ಸುರಕ್ಷಿತ ಸ್ಥಳಕ್ಕೆ ಹೋಗಿ ನಿಂತೆವು....'
ಚಾರ್ಧಾಮ್ ಯಾತ್ರೆಗೆ ಹೋಗಿ ಪ್ರವಾಹದಲ್ಲಿ ಸಿಲುಕಿ, ಸುರಕ್ಷಿತವಾಗಿ ತವರಿಗೆ ಮರಳಿದ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಬದುಕಿ ಬಂದ ಬಗೆಯನ್ನು ಹೊನ್ನಾವರಕ್ಕೆ ಹೋಗುವ ಮಾರ್ಗಮಧ್ಯೆ ನಗರದ ಕೋಡಿಬಾಗ್ ಸಮೀಪ ಎದುರಾದ ಸುದ್ದಿಗಾರರಿಗೆ ವಿವರಿಸಿದರು.
`ಗುಡ್ಡದಿಂದ ಹರಿಯುತ್ತಿದ್ದ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿತ್ತು. ಜನ, ಜಾನುವಾರುಗಳು ಆಟಿಕೆ ವಸ್ತುಗಳಂತೆ ತೇಲಿ ಹೋಗುತ್ತಿದ್ದವು. ಸೋಮಪ್ರಯಾಗ ಸಮೀಪ ನಾವು ದಾಟಬೇಕೆಂದಿದ್ದ ಸೇತುವೆ ನಮ್ಮ ಕಣ್ಣೆದುರೇ ಕೊಚ್ಚಿ ಹೋಯಿತು. ದೇವರೇ ನಮ್ಮನ್ನು ರಕ್ಷಿಸಿದ....' ಎಂದು ಕೊಂಕಣ ರೈಲ್ವೆಯ ಉದ್ಯೋಗಿ ಕೃಷ್ಣಕುಮಾರ ಶೇಟ್ ಕಣ್ಣೆದುರು ನಡೆದ ನಡೆದ ವಿದ್ಯಮಾನಗಳನ್ನು `ಪ್ರಜಾವಾಣಿ'ಗೆ ವಿವರಿಸಿದರು.
`ಯಾವುದೋ ಒಂದು ಅವ್ಯಕ್ತಶಕ್ತಿ ನಮ್ಮನ್ನು ಕಾಪಾಡಿತು. ಅದರ ಸೂಚನೆಯಂತೆ ಮುಂದೆ ಸಾಗಿದ್ದರಿಂದ ನಾವು ಬದುಕಿದೆವು. ನಾವು ಹೋಗುವ ಮಾರ್ಗದಲ್ಲಿ ಅಲ್ಲಲ್ಲೇ ಭೂಮಿ ಕುಸಿಯುತ್ತಿತ್ತು. ದುರ್ಗಮವಾದ ಹಾದಿಯಲ್ಲಿ ನಡೆದು ಸುರಕ್ಷಿತ ಸ್ಥಳಕ್ಕೆ ಹೋಗಿ ಜೀವ ರಕ್ಷಣೆ ಮಾಡಿಕೊಂಡೆವು' ಎಂದು ವಿ.ಡಿ.ಮೊಗೇರ ಅವರು ಭಯಾನಕ ಕ್ಷಣಗಳನ್ನು ಹಂಚಿಕೊಂಡರು.
`ನಮಗಿದು ಪುನರ್ಜನ್ಮ. ನಾವು ಆಶ್ರಯ ಪಡೆದ ಪ್ರದೇಶದಲ್ಲಿ ನೀರೇ ಇರಲಿಲ್ಲ. ಮಳೆ ಬಂದರೆ ಆ ನೀರನ್ನೇ ಹಿಡಿದು ಕುಡಿಯುತ್ತಿದ್ದೇವು. ಇದೂ ಅಲ್ಲದೆ ವಿಪರೀತ ಚಳಿ ನಮ್ಮನ್ನು ಕಾಡುತ್ತಿತ್ತು. ಸಮುದ್ರಮಟ್ಟದಿಂದ 1500 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲಿದ್ದ ಸಣ್ಣ ಗುಡಿಸಲಿನಲ್ಲಿ ಸುಮಾರು 150 ಜನ ಎರಡು ದಿನ ಆಶ್ರಯ ಪಡೆಯಬೇಕಾಯಿತು' ಎಂದು ಸೂರಜ್ ಶಾನಭಾಗ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.