ADVERTISEMENT

ದೇಶಪಾಂಡೆ ಕುಟುಂಬದ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಕಾರವಾರ:  ಕಾರ್ಖಾನೆಗಾಗಿ ಮೀಸಲಿ­ಟ್ಟಿದ್ದ ಸರ್ಕಾರಿ ಜಮೀನನ್ನು ತಮ್ಮ ಟ್ರಸ್ಟ್‌ಗೆ ಅಕ್ರಮವಾಗಿ ವರ್ಗಾಯಿಸಿ­ಕೊಂಡಿರುವ ಆರೋಪದ ಮೇಲೆ ಉನ್ನತ ಶಿಕ್ಷಣ ಹಾಗೂ ಪ್ರವಾ­ಸೋದ್ಯಮ ಸಚಿವ ಆರ್‌.ವಿ. ದೇಶ­ಪಾಂಡೆ ಮತ್ತು ಅವರ ಕುಟುಂಬದ ಸದ­ಸ್ಯರ ವಿರುದ್ಧ ಇಲ್ಲಿನ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಆರ್‌.ವಿ. ದೇಶಪಾಂಡೆ, ಪತ್ನಿ ರಾಧಾ, ಮಕ್ಕಳಾದ ಪ್ರಸಾದ ಹಾಗೂ ಪ್ರಶಾಂತ ವಿರುದ್ಧ ಸಾಮಾಜಿಕ ಕಾರ್ಯ­ಕರ್ತ ಜಯಂತ ತಿನೇಕರ್‌ ಮಾರ್ಚ್‌ 10ರಂದು ನ್ಯಾಯಾ­ಲಯಕ್ಕೆ ದೂರು ಸಲ್ಲಿಸಿದ್ದರು. ಶನಿವಾರ ಈ ಅರ್ಜಿಯ ವಿಚಾರಣೆ ನಡೆ­ಸಿದ ಸೆಷನ್ಸ್‌ ನ್ಯಾಯಾಧೀಶ ಡಿ.ಆರ್.­ರೇಣಕೆ ಅವರು ಪ್ರಕರಣದ ತನಿಖೆ ನಡೆಸಲು ಕಾರವಾರ ಲೋಕಾಯುಕ್ತ ಎಸ್ಪಿಗೆ ಸೂಚಿಸಿ, ಏಪ್ರಿಲ್‌ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದರು.

‘ಹಳಿಯಾಳ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ 34.24 ಎಕರೆ ಭೂಮಿ­ಯನ್ನು ಕಾರ್ಖಾನೆಗಾಗಿ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಬಗ್ಗೆ 2001ರ ಜನವರಿ 17ರಂದು ರಾಜ್ಯಪತ್ರದಲ್ಲಿ ಪ್ರಕಟವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ 9.12 ಎಕರೆ ಭೂಮಿ ದೇಶಪಾಂಡೆ ನೇತೃತ್ವದ ವಿ.ಆರ್‌.­ದೇಶಪಾಂಡೆ ಮೆಮೋರಿ­ಯಲ್‌ ಟ್ರಸ್ಟ್‌ಗೆ ವರ್ಗಾವಣೆಯಾಗಿದೆ.

ಆಗ ದೇಶ­ಪಾಂಡೆ­ಯವರು ರಾಜ್ಯದ ಕೈಗಾ­ರಿಕಾ ಸಚಿವರಾಗಿದ್ದರು. ಇದಾದ ನಂತರ ದೇಶಪಾಂಡೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಟ್ರಸ್ಟ್‌ ಹೆಸರಿನಲ್ಲಿ ದೊಡ್ಡ ದೊಟ್ ಕಂಪೆನಿಗಳಿಂದ ಭಾರಿ ಪ್ರಮಾ­-ಣ­ದಲ್ಲಿ ದೇಣಿಗೆ ಪಡೆದು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.