ADVERTISEMENT

`ದೊಡ್ಡವರು ಮರೆತರು: ಸಮಾಜ ಕೈ ಹಿಡಿಯಿತು'

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2013, 19:59 IST
Last Updated 11 ಫೆಬ್ರುವರಿ 2013, 19:59 IST
ದಾಂಡೇಲಿಯಲ್ಲಿ ಹತ್ಯೆಗೊಳಗಾದ ಎಸಿಎಫ್ ಮದನ ನಾಯಕ ಅವರ ಪತ್ನಿ ಸುಮತಿ ಹಾಗೂ ಪುತ್ರಿ ಗ್ರೀಷ್ಮಾ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ
ದಾಂಡೇಲಿಯಲ್ಲಿ ಹತ್ಯೆಗೊಳಗಾದ ಎಸಿಎಫ್ ಮದನ ನಾಯಕ ಅವರ ಪತ್ನಿ ಸುಮತಿ ಹಾಗೂ ಪುತ್ರಿ ಗ್ರೀಷ್ಮಾ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ   

ಹುಬ್ಬಳ್ಳಿ: `ಅರಣ್ಯ, ಕಾಡು ಉತ್ಪನ್ನ ಹಾಗೂ ವನ ಸಂಪತ್ತನ್ನು ನಮ್ಮ ಮನೆಯವರು ಕುಟುಂಬದ ಒಂದು ಅಂಗದಂತೆ ಕಾಣುತ್ತಿದ್ದರು. ಹೀಗಾಗಿಯೇ ಒಂದು ಪ್ರಾಣಿಗಾಗಿ ಅವರು ಜೀವವನ್ನೇ ತೆತ್ತರು. ಅವರಿಂದ ಅನೇಕ ರೀತಿಯ ಲಾಭ ಪಡೆದುಕೊಂಡ `ದೊಡ್ಡವರು' ನಮ್ಮ ಕೈಬಿಟ್ಟಿದ್ದಾರೆ. ಆದರೆ ಯಾವುದೇ ಸಂಬಂಧ ಇಲ್ಲದ `ಬಂಧುಗಳು' ಸಹಾಯಕ್ಕೆ ಬಂದಿದ್ದಾರೆ. ಅವರ ಬೆಂಬಲದ ಭರವಸೆಯೇ ಈಗ ನಮ್ಮ ಬದುಕಿನ ಆಸರೆ...'  

ದಾಂಡೇಲಿ ಮೊಸಳೆ ಉದ್ಯಾನದಲ್ಲಿ ಅಕ್ರಮ ಚಟುವಟಿಕೆ ತಡೆಯಲು ಹೋಗಿ ಹತ್ಯೆಯಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮದನ ನಾಯಕ ಅವರ ಪತ್ನಿ ಸುಮತಿ ಅವರ ಮಾತು ಇದು.

ಮಕ್ಕಳ ಶಿಕ್ಷಣಕ್ಕಾಗಿ ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಬಳಿಯ ಮನೆಯಲ್ಲಿ ವಾಸವಾಗಿರುವ ಅವರ ಕಣ್ಣೀರು ದುರಂತ ನಡೆದು ಹತ್ತು ತಿಂಗಳು ಕಳೆದರೂ ಬತ್ತಿಲ್ಲ. ಪತಿಯ ವಿಷಯ ಪ್ರಸ್ತಾಪಿಸಿದಾಗಲೆಲ್ಲ ಗಳಗಳನೆ ಅಳುತ್ತಿರುವ ಸುಮತಿ, ಕಾನೂನಿನ ಮೇಲೆ ಭರವಸೆ ಇರಿಸಿದ್ದಾರೆ. ಆದರೆ ಜಾಮೀನಿನಲ್ಲಿ ಹೊರ ಬಂದಿರುವ ಆರೋಪಿಗಳ ಕರಾಮತ್ತಿನಿಂದ ಅನ್ಯಾಯ ಆಗಬಾರದು, ಹೀಗೆ ಆಗದಂತೆ ನೋಡಿಕೊಳ್ಳಲು ಸಮಾಜದ ಬೆಂಬಲ ಬೇಕಾಗಿದೆ ಎಂದು ಸೋಮವಾರ `ಪ್ರಜಾವಾಣಿ' ಜೊತೆ ಮಾತನಾಡಿದ ಸುಮತಿ ಮನವಿ ಮಾಡಿಕೊಂಡರು.

`ದಾಂಡೇಲಿ ವನ್ಯಜೀವಿ ವಿಭಾಗದಲ್ಲಿ ಎಸಿಎಫ್ ಆಗಿದ್ದಾಗ ದೊಡ್ಡವರು ಅನೇಕರು ವಿವಿಧ ಕಾರಣಗಳಿಗಾಗಿ ಮನೆಯವರಿಗೆ ದೂರವಾಣಿ ಕರೆ ಮಾಡುತ್ತಿದ್ದರು. ಈಗ ಅಂಥವರ ಪೈಕಿ ಒಬ್ಬರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಹುಬ್ಬಳ್ಳಿಯಲ್ಲಿ ವಾಸವಾಗಿದ್ದರೂ ಸ್ಥಳೀಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಒಮ್ಮೆಯೂ ಮಾತನಾಡಿಸಿಲ್ಲ' ಎಂದು ಅವರು ದೂರಿದರು.

`ಪತಿಯ ನೌಕರಿಯನ್ನು ಹಿರಿಯ ಮಗಳು ಮೇಘಾಳಿಗೆ ಕೊಡುವುದಾಗಿ ಭರವಸೆ ನೀಡಿದ ಸರ್ಕಾರ ಈಗ ಆ ಮಾತನ್ನು ಮರೆತಂತಿದೆ. ಮುಖ್ಯಮಂತ್ರಿಗಳನ್ನು ವಿವಿಧ ಕಡೆಗಳಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾಯಿತು.

ಉದ್ಯೋಗದ ಆಸೆಯನ್ನು ಈಗ ಬಿಟ್ಟಿದ್ದೇವೆ. ಎಂ.ಎಸ್‌ಸಿ ಮುಗಿಸಿದ ಮೇಘಾ ಬೇರೆ ಕೆಲಸ ಹುಡುಕುವ ಪರಿಸ್ಥಿತಿ ಬಂದಿದೆ. ಏನೂ ಸಿಗದೇ ಇದ್ದರೂ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಅದೊಂದೇ ನಮ್ಮ ಆಸೆ' ಎಂದು ಹೇಳಿ ಅವರು ಕಣ್ಣೀರು ಒರೆಸಿಕೊಂಡರು.

`ಅರಣ್ಯ ದಾರಿಯಲ್ಲಿ ಪ್ರಯಾಣ ಮಾಡುವಾಗ ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೆ ಅಲ್ಲೇ ಕಾರು ನಿಲ್ಲಿಸಿ ಕ್ರಮಕ್ಕೆ ಮುಂದಾಗುತ್ತಿದ್ದರು. ಅಂಥ ಕರ್ತವ್ಯ ನಿಷ್ಠೆ ಹೊಂದಿದ್ದ ಅಧಿಕಾರಿಯ ಹತ್ಯೆ ಆದಾಗ ಅನೇಕರು ಬೀದಿಗಿಳಿದು ಹೋರಾಟ ಮಾಡಿದರು. ಆದರೆ ಅವರಿಂದ ಲಾಭ ಪಡೆದ ದೊಡ್ಡವರು ಯಾಕೋ ವೈಯಕ್ತಿಕ ದ್ವೇಷ ಇರಿಸಿಕೊಂಡವರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಹೋರಾಟದಲ್ಲಿ ಸೋತು ಹೋಗುತ್ತೇನೆಯೋ ಎಂಬ ಆತಂಕ ಕಾಡತೊಡಗಿದೆ. ಮಕ್ಕಳು ತೀರಾ ನಿರಾಶರಾಗಿದ್ದಾರೆ' ಎಂದರು ಅವರು.  

`ಪಪ್ಪನ ಹತ್ಯೆಯಾದಾಗ ಹೋರಾಟ ಮಾಡಿದವರ ಮೇಲೆ ಕೇಸು ದಾಖಲಿಸಲಾಗಿದೆ. ಅವರು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಲಾಗಿದೆ. ಇದು ಅನ್ಯಾಯದ ಪರಮಾವಧಿ. ಅವರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕು' ಎಂದು ಮದನ ನಾಯಕ ಅವರ ಪುತ್ರಿ, ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ಗ್ರೀಷ್ಮಾ ಆಗ್ರಹಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.