ADVERTISEMENT

ಧರ್ಮಸ್ಥಳಕ್ಕೆ ಹೋಗಲು ಸಿದ್ಧ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 7:35 IST
Last Updated 18 ಜೂನ್ 2011, 7:35 IST

ಬೆಂಗಳೂರು: ‘ಪ್ರಮಾಣ ಮಾಡಲು ತಮ್ಮನ್ನು ಜಾಹೀರಾತಿನ ಮೂಲಕ ಧರ್ಮಸ್ಥಳಕ್ಕೆ ಆಹ್ವಾನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸವಾಲು ಸ್ವೀಕರಿಸಿರುವುದಾಗಿ ತಿಳಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಬೆಳಿಗ್ಗೆ ಧರ್ಮಸ್ಥಳಕ್ಕೆ ಹೋಗಲು ಸಿದ್ಧ’ ಎಂದು ತಿಳಿಸಿದರು.

ಶನಿವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ‘ಸರ್ಕಾರದ ಹಣದಲ್ಲಿ ಪತ್ರಿಕೆಗಳಿಗೆ ಬಹಿರಂಗ ಸವಾಲಿನ ಜಾಹೀರಾತು ನೀಡುವ ಮೂಲಕ ಮುಖ್ಯಮಂತ್ರಿ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುಳ್ಳುಗಳನ್ನು ಹೇಳುವ ಮೂಲಕ ಸತ್ಯವೆಂದು ನಂಬಿಸಲು ಯತ್ನಿಸುತ್ತಿದ್ದಾರೆ. ಎಂದು ಅವರು ಆರೋಪಿಸಿದರು.

‘ಕಳೆದ ನಾಲ್ಕೈದು ತಿಂಗಳುಗಳಿಂದ ನಾನು ಸಿಎಂ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಾ ಬಂದಿದ್ದೇನೆ. ಆದರೆ ಇತ್ತೀಚೆಗೆ ಯಡಿಯೂರಪ್ಪನವರು ತಮ್ಮ ವಿರುದ್ದದ ಹಗರಣಗಳನ್ನು ಬಹಿರಂಗಪಡಿಸದಂತೆ ತಮ್ಮ ಆಪ್ತರ ಮೂಲಕ ನನ್ನ ಜತೆ ಸಂಧಾನ ನಡೆಸಲು ನನ್ನ ಸಹಾಯಕರನ್ನು ಸಂಪರ್ಕಿಸಿದ್ದರು. ಈ ಕುರಿತು ನನ್ನ ಬಳಿ ದಾಖಲೆಗಳಿವೆ’ ಎಂದು ಕುಮಾರಸ್ವಾಮಿ ತಿಳಿಸಿದರು.

ನಮ್ಮ ಕುಟುಂಬದ ವಿರುದ್ದ  ಸಿಎಂ ಅನಗತ್ಯವಾಗಿ ಸುಳ್ಳು ಹಗರಣಗಳ ಆರೋಪ ಮಾಡುತ್ತಿದ್ದಾರೆ. ಸತ್ಯವನ್ನು ಜನರ ಮುಂದಿಟ್ಟಿರುವ ನಾನು ಪಲಾಯನವಾದಿಯಲ್ಲ, ಮುಂದಿನ ದಿನಗಳಲ್ಲಿ ಸಿಎಂ ವಿರುದ್ದ ಇನ್ನಷ್ಟು ಭ್ರಷ್ಟಾಚಾರದ ದಾಖಲೆಗಳನ್ನು ಬಹಿರಂಗಗೊಳಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.