ಧಾರವಾಡ: ಧಾರವಾಡದಲ್ಲಿ ಮೇ 26 ಮತ್ತು 27ರಂದು ‘ಮೇ ಸಾಹಿತ್ಯ ಮೇಳ’ ನಡೆಯಲಿದೆ. ತೆಲುಗಿನ ಸ್ತ್ರೀವಾದಿ ಬರಹಗಾರ್ತಿ ಓಲ್ಗಾ ಚಾಲನೆ ನೀಡಲಿದ್ದಾರೆ. ನಟ ಪ್ರಕಾಶ್ ರೈ ದಿಕ್ಸೂಚಿ ಭಾಷಣ ಮಾಡಲಿದ್ದು, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮೇಳದ ಆಯೋಜಕ ಬಸವರಾಜ ಸೂಳಿಭಾವಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಭಾರತದ ಚಿಂತಕರು ಹಾಗೂ ಸಾಹಿತಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಬಾರಿಯ ಮೇ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ. ‘ಬಹುತ್ವ ಭಾರತ: ಇಂದು ಮತ್ತು ನಾಳೆ’ ಎಂಬ ವಿಷಯ ಕುರಿತು ಚರ್ಚೆ, ಗೋಷ್ಠಿ, ಕವಿಗೋಷ್ಠಿ ಕಾರ್ಯಕ್ರಮಗಳು ಜರುಗಲಿದೆ. ಕರ್ನಾಟಕವೂ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಯುವಕವಿ ಲಕ್ಷ್ಮೀನಾರಾಯಣ ಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ಲೇಖಕಿ, ಕಲಬುರ್ಗಿಯ ಕೆ.ನೀಲಾ ಅವರಿಗೆ ‘ಬಂಡ್ರಿ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿ ನೀಡಲಾಗುತ್ತಿದೆ. ಎರಡೂ ಪ್ರಶಸ್ತಿಗಳು ತಲಾ ₹5ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ ಎಂದು ತಿಳಿಸಿದರು.
ಗದುಗಿನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಧಾರವಾಡದ ಚಿತ್ತಾರ ಕಲಾ ಬಳಗ ಜಂಟಿಯಾಗಿ ಈ ಮೇಳವನ್ನು ಆಯೋಜಿಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.