ADVERTISEMENT

ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 8:20 IST
Last Updated 7 ಅಕ್ಟೋಬರ್ 2011, 8:20 IST

ಬೆಂಗಳೂರು (ಪಿಟಿಐ): ಪತ್ನಿ ಮೇಲೆ ಹಲ್ಲೆ ಮಾಡಿ ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ಪಿಂಟೋ ಅವರು ದರ್ಶನ್ ಅವರಿಗೆ 25,000 ರೂಪಾಯಿಗಳ ವೈಯಕ್ತಿಕ ಬಾಂಡ್ ನೀಡುವಂತೆ ಹಾಗೂ ಅವರು ಪತ್ನಿ ಸಮೇತರಾಗಿ ಅಕ್ಟೋಬರ್ 13ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ  ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದರು.

ದಂಪತಿಗಳು ಸಮಾಲೋಚನೆಯ ಮೂಲಕ  `ಹೊಂದಾಣಿಕೆಯ ಸಂಬಂಧ~ ಕಾಯ್ದುಕೊಳ್ಳುವ `ಸೂಕ್ತ ತೀರ್ಮಾನಕ್ಕೆ ಬಂದು~  ವಕೀಲರು ಹಾಗೂ ಸರ್ಕಾರಿ ಅಭಿಯೋಜಕ ಅಕ್ಟೋಬರ್ 13ರಂದು ವಕೀಲರ ಸಮೇತ ತಮ್ಮ ಕಚೇರಿಗೆ ಹಾಜರಾಗುವಂತೆ ನ್ಯಾಯಮೂರ್ತಿಗಳು ಹೇಳಿದರು.

ದಂಪತಿಗಳು ಹೊಂದಾಣಿಕೆಯಿಂದ ಬದುಕುವ ಸಾಧ್ಯತೆಯನ್ನು ಶೋಧಿಸಲು ಸಂಧಾನದ ಮೂಲಕ `ಸೂಕ್ತ ತೀರ್ಮಾನ ಕೈಗೊಳ್ಳಲು~ ದಂಪತಿ ತಮ್ಮ ವಕೀಲರು ಮತ್ತು ಸರ್ಕಾರಿ ಅಭಿಯೋಜಕರ ಜೊತೆ ಅಕ್ಟೋಬರ್ 13ರಂದು ತಮ್ಮ ಕಚೇರಿಯಲ್ಲಿ ಹಾಜರಿರಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು.

ಜನಪ್ರಿಯ ನಟನಾಗಿರುವ ದರ್ಶನ್ ಅವರನ್ನು ನಿರಂತರ ಕಾರಾಗೃಹದಲ್ಲಿರಿಸಿ `ಸ್ಥೈರ್ಯ ಕುಂದಿಸುವುದು~ ಸರಿಯಲ್ಲ, ಇನ್ನು ಮುಂದೆ ಅವರು ತಮ್ಮ ವೃತ್ತಿಯ ಜತೆಗೆ ಕುಟುಂಬದೊಂದಿಗೆ  ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ದರ್ಶನ್ ಅವರ ಜಾಮೀನು ಮನವಿಯನ್ನು ವಿರೋಧಿಸಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸುವ ಮೂಲಕ ಪತ್ನಿ ಪೀಡಕ ವರ್ತನೆಯನ್ನು ತೋರಿಸಿದ್ದಾರೆ. ಸಾಲದ್ದಕ್ಕೆ ಆಕೆಗೆ `ಸಿಗರೇಟ್‌ನಿಂದ ಸುಟ್ಟಿರುವ~ ಅವರಿಗೆ ಜಾಮೀನು ನೀಡುವುದು ಅವರ ಪತ್ನಿಯ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ. ನ್ಯಾಯಾಲಯ ಸೂಕ್ತ ಷರತ್ತುಗಳನ್ನು ಒಳಗೊಂಡಿರುವ ಮುಚ್ಚಳಿಕೆಯೊಂದನ್ನು ದರ್ಶನ್‌ರಿಂದ ಪಡೆಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT