ಮೈಸೂರು: ಜೆಡಿಎಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಂಗಳವಾರ ಹೇಳಿದರು.
‘ಈ ಬಾರಿ 10 ರಿಂದ 12 ಪಕ್ಷೇತರರು ಗೆಲುವು ಪಡೆಯಬಹುದು ಎಂಬುದು ನನ್ನ ಲೆಕ್ಕಾಚಾರ. ಬಿಎಸ್ಪಿಗೆ 2–3 ಸ್ಥಾನಗಳು ಲಭಿಸಬಹುದು. ನನಗೆ ಭ್ರಮೆ ಇಲ್ಲವೇ ಇಲ್ಲ. ನನ್ನದೇ ಆದ ಲೆಕ್ಕಾಚಾರಗಳಿಲ್ಲದೆ ಯಾವುದೇ ಮಾತನಾಡುವುದಿಲ್ಲ. ಪಕ್ಷೇತರರ ಜತೆ ಸೇರಿ ಸರ್ಕಾರ ರಚಿಸುವ ದೃಢವಾದ ನಂಬಿಕೆಯಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಎರಡು ದಿನ ಪ್ರವಾಸ ಮಾಡಿ ಬಂದಿದ್ದೇನೆ. ಆ ಭಾಗದ ಜನರು ಜೆಡಿಎಸ್ ಪರ ಒಲವು ತೋರಿದ್ದಾರೆ. ಅಲ್ಲಿ ನಮಗೆ 30 ರಿಂದ 35 ಸ್ಥಾನಗಳು ದೊರೆಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರುಣಾ, ಕೃಷ್ಣರಾಜದಲ್ಲಿ ಗೆಲುವು ಕಷ್ಟ: ಮೈಸೂರಿನ 11 ಕ್ಷೇತ್ರಗಳಲ್ಲಿ 9ರಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ವರುಣಾ ಮತ್ತು ಕೃಷ್ಣರಾಜ ಕ್ಷೇತ್ರಗಳಲ್ಲಿ ಗೆಲುವು ಕಷ್ಟ ಎಂದು ದೇವೇಗೌಡ ವಾಸ್ತವಾಂಶವನ್ನು ಬಿಚ್ಚಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.