ADVERTISEMENT

ನರಭಕ್ಷಕ ಹುಲಿಗೆ ನಾಲ್ಕನೇ ಬಲಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST
ನರಭಕ್ಷಕ ಹುಲಿಗೆ ನಾಲ್ಕನೇ ಬಲಿ
ನರಭಕ್ಷಕ ಹುಲಿಗೆ ನಾಲ್ಕನೇ ಬಲಿ   

ಮೈಸೂರು: ಎಚ್‌.ಡಿ. ಕೋಟೆ ತಾಲ್ಲೂ­ಕಿನ ಚಿಕ್ಕಬರಗಿ ಗ್ರಾಮದ ಬಳಿ ಅರಣ್ಯ­ದಲ್ಲಿ ನರಭಕ್ಷಕ ಹುಲಿ ಮಂಗಳ­ವಾರ  ದನಗಾಹಿಯೊಬ್ಬರನ್ನು ತಿಂದಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಒಂದು ವಾರದಲ್ಲಿ ನರಭಕ್ಷಕ ಹುಲಿಗಳಿಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.

ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ದನ ಕಾಯುತ್ತಿದ್ದ ಚಿಕ್ಕಬರಗಿ ಗ್ರಾಮದ ಶಿವಮಲ್ಲಪ್ಪ ಬಸಪ್ಪ (60) ಹುಲಿಗೆ ಬಲಿಯಾದ ದುರ್ದೈವಿ. ಇದೇ ಹುಲಿ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈ ಮುನ್ನ ಇಬ್ಬರನ್ನು ತಿಂದು ಹಾಕಿತ್ತು.

ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎರಡು ನರಭಕ್ಷಕ ಹುಲಿಗಳಿವೆ. ಇದರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಸಂಚರಿಸು­ತ್ತಿದ್ದ ಅರಣ್ಯ ಪಾಲಕ ಸುರೇಶ್‌ ಎಂಬುವವರನ್ನು ಕೊಂದು ಹಾಕಿದ ಹುಲಿ ಮತ್ತು ಎಚ್‌.ಡಿ. ಕೋಟೆ ಅರಣ್ಯದಲ್ಲಿ ನರಭಕ್ಷಕ ಹುಲಿ ಎರಡೂ ಬೇರೆ ಬೇರೆ ಎಂದು ಅರಣ್ಯಾಧಿ­ಕಾರಿಗಳು ಹೇಳುತ್ತಿದ್ದಾರೆ.

ಆಕ್ರೋಶ: ಘಟನೆಯಿಂದ ರೊಚ್ಚಿಗೆದ್ದ ಚಿಕ್ಕಬರಗಿ ಗ್ರಾಮಸ್ಥರು ಯಡಿಯಾಲ ಅರಣ್ಯ ವಲಯ ಕಚೇರಿ ಅತಿಥಿ ಗೃಹದ ಮೇಲೆ ದಾಳಿ ಮಾಡಿ ಕಿಟಕಿಯ ಗಾಜು ಮತ್ತು ವಾಹನಗಳನ್ನು ಜಖಂಗೊಳಿಸಿ­ದರು. ಹುಲಿ ಯೋಜನೆಗೆ ಸೇರಿದ ವಾಹನವೊಂದಕ್ಕೆ ಬೆಂಕಿ ಹಚ್ಚಿದರು ಎಂದು ವರದಿಯಾಗಿದೆ.

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ಓಂಕಾರ ವಲಯದ ಅರಣ್ಯ ಪ್ರದೇಶದಲ್ಲಿ ಬೇಗೂರು ಹೋಬಳಿಯ ಶ್ರೀಕಂಠಪುರ ಗ್ರಾಮದ ಮಲ್ಲೇಗೌಡ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT