ಬೆಳಗಾವಿ: ತಾಲ್ಲೂಕಿನ ಯಳ್ಳೂರು ಗ್ರಾಮದಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಹಾಕಲಾಗಿದ್ದ `ಮಹಾರಾಷ್ಟ್ರ ರಾಜ್ಯ- ಯಳ್ಳೂರು' ನಾಮಫಲಕವನ್ನು ಬುಧವಾರ ಬೆಳಗಿನ ಜಾವ ಧ್ವಂಸಗೊಳಿಸಿದ್ದ ಸ್ಥಳದಲ್ಲೇ ಮತ್ತೆ ನಾಮಫಲಕ ನಿರ್ಮಿಸಲಾಗಿದ್ದು, ಗ್ರಾಮದಲ್ಲಿ ವಾತಾವರಣ ಬಿಗುವಿನಿಂದ ಕೂಡಿದೆ.
ನಾಮಫಲಕ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕೆಲವರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಾಮಫಲಕ ಧ್ವಂಸ ಪ್ರಕರಣದಿಂದ ಮರಾಠಿ ಭಾಷಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ನಂತರ ಪುನಃ `ಮಹಾರಾಷ್ಟ್ರ ರಾಜ್ಯ- ಯಳ್ಳೂರು' ನಾಮಫಲಕ ನಿರ್ಮಿಸಲಾಯಿತು.
ಪರಿಶಿಷ್ಟ ಜಾತಿ ಜನರ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾಗದ ಸುತ್ತಲಿನ ಗ್ರಾಮಗಳಲ್ಲಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಬೆಳಗಾವಿ ತಾಲ್ಲೂಕಿನಲ್ಲಿ `ಮಹಾರಾಷ್ಟ್ರ ರಾಜ್ಯ' ಎಂಬ ನಾಮಫಲಕ ಹಾಕಿರುವುದು ಕನ್ನಡಪರ ಹಾಗೂ ಮರಾಠಿಪರ ಸಂಘಟನೆಗಳ ನಡುವೆ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.