ನರಸಿಂಹರಾಜಪುರ: ನಾಯಿಗಳು ದಾಳಿ ನಡೆಸಿದ ಪರಿಣಾಮ ಎರಡು ವರ್ಷ ಪ್ರಾಯದ ಗಂಡು ಜಿಂಕೆ ಮರಿಯೊಂದು ಗುರುವಾರ ಮೃತಪಟ್ಟಿದೆ.
ತಾಲ್ಲೂಕಿನ ಕಮಲಾಪುರ ಗ್ರಾಮದ ಮೂಡ್ಲಿಯ ರಾಮಣ್ಣ ಎಂಬುವರ ಜಮೀನಿಗೆ ಗುರುವಾರ ಬೆಳಿಗ್ಗೆ 6 ಗಂಟೆ ಸಮಯಕ್ಕೆ ಬಂದಿದ್ದ ಜಿಂಕೆ ಮರಿಯನ್ನು ಕಂಡು ನಾಯಿಗಳ ಹಿಂಡು ದಾಳಿ ನಡೆಸಿತು. ಇದರಿಂದ ಜಿಂಕೆ ತೀವ್ರ ಗಾಯಗೊಂಡಿತು.
ನಾಯಿಗಳ ಕೂಗಾಟ ಕೇಳಿದ ಮೂಡ್ಲಿಯ ರಾಮಣ್ಣ ಅವರ ಮನೆಯವರು ಹಾಗೂ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದರು. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸೀತೂರು ವಲಯ ಅರಣ್ಯ ರಕ್ಷಕ ವಾಸುದೇವ, ಅರಣ್ಯ ವೀಕ್ಷಕ ರೂಪ್ಲನಾಯಕ್ ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ಕೂಡಿಸಲು ಪಶು ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಮಾರ್ಗ ಮಧ್ಯದಲ್ಲೇ ಜಿಂಕೆ ಮೃತಪಟ್ಟಿತು.
ಪಶುವೈದ್ಯಾಧಿಕಾರಿ ಡಾ.ರಾಕೇಶ್ ಅವರು ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಿಂಕೆಯ ಅಂತ್ಯಕ್ರಿಯೆ ನಡೆಸಲಾಯಿತು. ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ, ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.