ADVERTISEMENT

ನಾಳೆ ದಕ್ಷಿಣ ಕನ್ನಡ ಬಂದ್‌

ಎತ್ತಿನಹೊಳೆ ಯೋಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಮಂಗಳೂರು:  ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇದೇ ಸೋಮವಾರ ಶಿಲಾನ್ಯಾಸ ಮಾಡಲು ಉದ್ದೇಶಿಸಿರು­ವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ದಿನವನ್ನು ‘ಕರಾಳ ದಿನ’ವನ್ನಾಗಿ ಆಚರಿಸಲು ನಿರ್ಧರಿಸ­ಲಾಗಿದೆ. ವಿವಿಧ ಪಕ್ಷಗಳು, ಹತ್ತಾರು ಸಂಘಟನೆಗಳು ಸ್ವಯಂ ಘೋಷಿತ ಬಂದ್‌ಗೆ ಕರೆ ಕೊಟ್ಟಿರುವುದರಿಂದ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುವ ನಿರೀಕ್ಷೆ ಇದೆ.

ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ನೇತೃತ್ವದ ‘ಕರಾವಳಿ ಜೀವನದಿ ನೇತ್ರಾವತಿ ಸಂರಕ್ಷಣಾ ಸಮಿತಿ  ಸಹ್ಯಾದ್ರಿ ಸಂರಕ್ಷಣಾ ಸಂಚಯ ನೇತೃತ್ವದಲ್ಲಿ ಕರಾಳ ದಿನ ಆಚರಣೆಗೆ ಕರೆ ನೀಡಲಾಗಿದ್ದು ಜಿಲ್ಲೆಯ ಹಲವಾರು ಜನಪರ ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಪಕ್ಷಾತೀತವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಎತ್ತಿನಹೊಳೆ ಅಥವಾ ನೇತ್ರಾ­ವತಿಯನ್ನು ತಿರುಗಿಸುವ ಯೋಜನೆ­­ಯನ್ನು ವಿರೋಧಿಸುವುದಾಗಿ ಹೇಳಿದೆ. ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌ ಅವರೂ ಯೋಜನೆಯನ್ನು ವಿರೋಧಿಸಿದ್ದಾರೆ.

ಜೆಡಿಎಸ್ ದ.ಕ. ಜಿಲ್ಲಾ ಘಟಕವೂ ಸರ್ಕಾ­ರದ ನಿರ್ಧಾರವನ್ನು ಖಂಡಿಸಿದ್ದು, ‘ದಕ್ಷಿಣ ಕನ್ನಡದ ಜನತೆ ಬಂದ್‌ ಆಚರಿ­ಸುವುದು ಅನಿವಾರ್ಯ’ ಎಂದಿದೆ. ‘ಎತ್ತಿನ ಹೊಳೆ ಯೋಜನೆ ವಿರೋಧಿಸದೆ ಬೇರೆ ವಿಧಿಯಿಲ್ಲ’ ಎಂಬುದಾಗಿ ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.