ADVERTISEMENT

‘ನಿಜವಾದ ಬಸವಮಾರ್ಗದ ಎದುರು ವೀರಶೈವ, ಲಿಂಗಾಯತ ಚರ್ಚೆ ಅಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಎಲ್. ಹನುಮಂತಯ್ಯ
ಎಲ್. ಹನುಮಂತಯ್ಯ   

ದಾವಣಗೆರೆ: ‘ವೀರಶೈವ, ಲಿಂಗಾಯತ ಧರ್ಮ ಪ್ರತಿಪಾದನೆಗೆ ಬಳಸುತ್ತಿರುವ ಬಸವಮಾರ್ಗ ನಿಜವಾದುದಲ್ಲ; ರಾಜಕೀಯ ಉದ್ದೇಶದ ಮಾರ್ಗವಿದು’ ಎಂದು ಕವಿ ಡಾ.ಎಲ್. ಹನುಮಂತಯ್ಯ ಟೀಕಿಸಿದರು.

ದಾವಣಗೆರೆಯಲ್ಲಿ ಸೋಮವಾರ ಪ್ರಾರಂಭವಾದ ಎರಡು ದಿನಗಳ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಭಾಷಣ ಮಾಡಿದ ಅವರು, ‘ತಾನು ಮಾದಾರ ಚನ್ನಯ್ಯನ ಮನೆಯ ಮಗ ಎಂದು ಬಸವಣ್ಣ 47 ಸಲ ಹೇಳಿಕೊಂಡಿದ್ದು, ಅದು ನಿಜವಾದ ಬಸವಮಾರ್ಗ. ಕುದುರೆ ಮೇಲೆ ಕೂರಿಸಿರುವ ಬಸವಮಾರ್ಗ ಕೂಡ ಸರಿಯಾದುದಲ್ಲ. ನಿಜವಾದ ಬಸವಮಾರ್ಗದ ಎದುರು ವೀರಶೈವ, ಲಿಂಗಾಯತ ಚರ್ಚೆ ಅಪ್ರಸ್ತುತ. ಲಾಭದ ಮಾರ್ಗವಾಗಿ ಅದನ್ನು ಬದಲಿಸಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.

ಭಾರತೀಯ ತತ್ವಜ್ಞಾನವನ್ನು ನಿರಂತರವಾಗಿ ಪ್ರಶ್ನಿಸುತ್ತಾ ಬಂದಿರುವುದನ್ನು ಉಲ್ಲೇಖಿಸಿದ ಹನುಮಂತಯ್ಯ, ‘ಸರ್ವೆ ಜನಾಃ ಸುಖಿನೋ ಭವಂತು ಹಾಗೂ ವಸುದೈವ ಕುಟುಂಬಕಂ ಎನ್ನುವ ತತ್ವಗಳು ಘೋಷಣೆಗಷ್ಟೇ ಸೀಮಿತಗೊಂಡಿವೆ. ಅವು ಅನುಷ್ಠಾನಕ್ಕೆ ಬರಲೇ ಇಲ್ಲ. ಸಮಾನತೆಯ ಅಂಗಳದಲ್ಲಿ ತಾರತಮ್ಯದ ಮೆಟ್ಟಿಲುಗಳನ್ನು ಅಳಿಸಬೇಕು. ಕಬೀರದಾಸ, ಕನಕದಾಸ, ರವಿದಾಸರು ಜಾತಿ ವ್ಯವಸ್ಥೆ ವಿರೋಧಿಸಿದವರು. ಅವರೆಲ್ಲ ಭಕ್ತಿಮಾರ್ಗದ ಅಡಿಯೇ ಕೆಲಸ ಮಾಡಿದರೂ ಫಲ ಸಿಗಲಿಲ್ಲ. ಒಬ್ಬ ಅಸ್ಪೃಶ್ಯ ದಾಸನೂ ನಮಗೆ ಸಿಗಲೇ ಇಲ್ಲ. ಕನಕದಾಸರಿಗೂ ಕೃಷ್ಣ ದರ್ಶನ ಆಗಲಿಲ್ಲ. ಹಿಂಬಾಗಿಲಿನಿಂದ ನೋಡಿದರೆಂಬ ಭ್ರಮೆಯನ್ನಷ್ಟೇ ಪರಂಪರೆ ಉಳಿಸಿದೆ’ ಎಂದು ಹೇಳಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾಡಳಿತ ದಲಿತ ಸಾಹಿತ್ಯ ಸಮ್ಮೇಳನವನ್ನು ಜಂಟಿಯಾಗಿ ಆಯೋಜಿಸಿದ್ದು, ವಿವಿಧ ಗೋಷ್ಠಿಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.