ADVERTISEMENT

ನಿರ್ಮಾಣ ಕಾಮಗಾರಿಗಳ ಕಾರ್ಮಿಕರಿಗೆ ನಿವೃತ್ತಿ ವೇತನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಬೆಂಗಳೂರು: ನಿರ್ಮಾಣ ಕಾಮಗಾರಿಗಳ ಕಾರ್ಮಿಕರಿಗೆ ನಿಗದಿತ ವಯಸ್ಸಿನ ನಂತರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಿವೃತ್ತಿ ವೇತನ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು.ಶನಿವಾರ ವಿಧಾನಸೌಧದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಪುರುಷ ಕಾರ್ಮಿಕರಿಗೆ 55 ವರ್ಷದ ಬಳಿಕ ಮತ್ತು ಮಹಿಳಾ ಕಾರ್ಮಿಕರಿಗೆ 50 ವರ್ಷದ ಬಳಿಕ ನಿವೃತ್ತಿ ವೇತನ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದರು.ಕಾರ್ಮಿಕರಿಗೆ ಮಾಸಿಕ ತಲಾ 300 ರೂಪಾಯಿ ನಿವೃತ್ತಿ ವೇತನ ನೀಡುವ ಉದ್ದೇಶ ಸರ್ಕಾರಕ್ಕಿದೆ ಎಂದು ವಿವರಿಸಿದರು.

ಬೆಂಗಳೂರು ಒನ್ ಸೇವೆ: ನೋಂದಾಯಿತ ಕಾರ್ಮಿಕರು ಮಂಡಳಿಗೆ ವಂತಿಗೆ ಸಲ್ಲಿಸಲು ಇನ್ನುಮುಂದೆ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳನ್ನು ಬಳಸಿಕೊಳ್ಳಬಹುದು. ಮಾರ್ಚ್ 1ರಿಂದ ಈ ಕೇಂದ್ರಗಳ ಮೂಲಕವೇ ವಂತಿಗೆ ಸಂಗ್ರಹಿಸಲಾಗುವುದು. ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ ಎಂದರು.

ಕಾರ್ಮಿಕರಿಗೆ ಹೊರೆ ಇಲ್ಲ:
ಕಾರ್ಖಾನೆಗಳಲ್ಲಿನ ಕೆಲಸದ ಅವಧಿಯನ್ನು 10ಗಂಟೆಗೆ ವಿಸ್ತರಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಬಚ್ಚೇಗೌಡ, ‘ಕಾರ್ಖಾನೆಗಳ ಕೋರಿಕೆ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ದಿನದ ಗರಿಷ್ಠ ಕೆಲಸದ ಅವಧಿಯನ್ನಷ್ಟೇ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ವಾರದ ಒಟ್ಟು ಕೆಲಸದ ಅವಧಿಯಲ್ಲಿ ಯಾವುದೇ ಬದಲಾವಣೆ ಆಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.