ADVERTISEMENT

ನಿಲ್ಲದ ಮಳೆಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:36 IST
Last Updated 8 ಮಾರ್ಚ್ 2014, 19:36 IST

ಹುಬ್ಬಳ್ಳಿ/ ತುಮಕೂರು: ಉತ್ತರ ಕರ್ನಾ­ಟಕವೂ ಸೇರಿದಂತೆ ರಾಜ್ಯದ ವಿವಿಧೆಡೆ   ಅಕಾಲಿಕ ಮಳೆಯ ರೌದ್ರಾವ­ತಾರ ಶನಿವಾರವೂ ಮುಂದುವರಿದಿದೆ.

ಬಳ್ಳಾರಿ, ಬಾಗಲಕೋಟೆ, ವಿಜಾಪುರ ಚಿತ್ರದುರ್ಗ, ತುಮಕೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯ  ಅನೇಕ ಕಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಭಾರಿ ಮಳೆ ಯಿಂದಾಗಿ ವ್ಯಾಪಕ ಬೆಳೆ ಹಾನಿ ಯಾಗಿದೆ.

ಹೊಲದಿಂದ ವಾಪಸು ಮನೆಗೆ ಹೊರ­ಟಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚಿಕ್ಕತಡಸಿ ಗ್ರಾಮದ ಶಿವ­ಲಿಂಗಯ್ಯ ಸಿದ್ದಯ್ಯ ಹಿರೇಮಠ (28) ಎಂಬ ಯುವಕ ಸಿಡಿಲಿನಿಂದ ಸ್ಥಳದ­ಲ್ಲಿಯೇ ಸಾವನ್ನಪ್ಪಿದ್ದಾರೆ. ಬಾಗಲ­ಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂ­ಕಿನ ಆಡಗಲ್ಲು ಗ್ರಾಮದ ಬಳಿಯ ಸಿದ್ಧ­ನಗವಿ ಗ್ರಾಮದ ಹೊಲದಲ್ಲಿದ್ದ ಐ.ಟಿ.ಐ ವಿದ್ಯಾರ್ಥಿ ಶಿವನಗೌಡ ಬಸಪ್ಪ ಗೌಡರ (17) ಸಿಡಿಲು ಬಡಿದಿದ್ದರಿಂದ ಸ್ಥಳದ­ಲ್ಲಿಯೇ ಸತ್ತಿದ್ದಾನೆ.

ವಿಜಾಪುರ ವರದಿ:  ಜಿಲ್ಲೆಯ ತಾಳಿಕೋಟೆ ಪಟ್ಟಣ ಹಾಗೂ ಸುತ್ತ­ಮುತ್ತ ಶುಕ್ರವಾರ ರಾತ್ರಿ 11­ಗಂಟೆ­ಯಿಂದ ಬೆಳಗಿನ ಜಾವ 4 ಗಂಟೆಯ­ವರೆಗೆ ಸುರಿದ ಮಳೆಯಿಂದ  ಡೋಣಿ ನದಿಯ ನೆಲಮಟ್ಟದ ಸೇತುವೆ ಮೇಲೆ ಪ್ರವಾಹ ಬಂದು ಸಂಚಾರ ಸ್ಥಗಿತ­ಗೊಂಡಿತ್ತು.

ಬಾಗಲಕೋಟೆ ವರದಿ: ಶನಿವಾರ ಸಂಜೆ ಭಾರಿ ಗಾತ್ರದ ಆಲಿಕಲ್ಲುಗಳೊಂದಿಗೆ ಸುರಿದ ಮಳೆಯಿಂದ ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಗ್ರಾಮದಲ್ಲಿ ಬೃಹತ್‌ ಗಾತ್ರದ ಆಲಿಕಲ್ಲು ತಲೆ ಮೇಲೆ ಬಿದ್ದು, ಅಮೃತ್‌ ಶಹಾ (35) ಎಂಬು­ವರಿಗೆ ತೀವ್ರ ಗಾಯವಾಗಿದೆ.
ಇದೇ ಗ್ರಾಮದ ರಮೇಶ ಕಿಶೋರಿ ಎಂಬು­ವವರ ಕಣ್ಣಿಗೆ ಆಲಿಕಲ್ಲಿನ ಏಟು ಬಿದ್ದು ಕಣ್ಣು ಕಾಣಿಸದಂತಾಗಿದೆ.

ತುಮಕೂರು ವರದಿ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಗಾಳಿ ಮಳೆ ಮತ್ತು ಆಲಿಕಲ್ಲು ಬಿದ್ದಿದೆ. 
ಪಾವಗಡ ತಾಲ್ಲೂಕಿನ ದೊಮ್ಮತ ಮರಿ, ಅರಸೀ­ಕೆರೆ, ಮುರಾರಾಯನ ಹಳ್ಳಿಯಲ್ಲಿ ಮಳೆಗೆ ಮೆಕ್ಕೆ ಜೋಳ, ದಾಳಿಂಬೆ, ಮೆಣಸಿನ ಕಾಯಿ, ಬಾಳೆ ತೋಟಗಳು ನೆಲಕಚ್ಚಿವೆ.

ಮಧುಗಿರಿ ವೀರಗಾನಹಳ್ಳಿಯಲ್ಲಿ ಕೋಳಿ ಫಾರಂ ಶೆಡ್‌ ಮುರಿದು ಬಿದ್ದಿದೆ. ಶಿರಾ ತಾಲ್ಲೂಕು ಬರಗೂರು, ಕೊರಟ ಗೆರೆ, ಚಿಕ್ಕ­ನಾಯಕನಹಳ್ಳಿ, ಗುಬ್ಬಿಯಲ್ಲಿ ಉತ್ತಮ ಮಳೆ­ಯಾಗಿದೆ.  ಕೆಲವು ಕಡೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಗಾಳಿಗೆ ಮನೆಯ ಹೆಂಚು, ಶೀಟ್‌­ಗಳು ಹಾರಿ ಹೋಗಿವೆ. ಮಾವಿನ ಕಾಯಿ ಮಿಡಿ ಮತ್ತು ಹೂವು ಉದುರಿ ಹೋಗಿವೆ.

ದಾವಣಗೆರೆ ವರದಿ: ಆಲಿಕಲ್ಲು ಮಳೆಯಿಂದಾಗಿ ದಾವಣ­ಗೆರೆ ಜಿಲ್ಲೆಯ ಮಲೆಬೆನ್ನೂರು, ಹೊನ್ನಾಳಿ, ಹರಪನಹಳ್ಳಿಯಲ್ಲಿ ಹಾನಿ ಸಂಭ­ವಿಸಿದೆ. ಶನಿವಾರ ಸಂಜೆ ದಾವಣಗೆರೆ ನಗರ, ಚನ್ನಗಿರಿ ತಾಲ್ಲೂಕಿನ ಹಲವೆಡೆ ಗುಡುಗಿನಿಂದ ಕೂಡಿದ ಮಳೆಯಾಗಿದೆ.
ಶಿವಮೊಗ್ಗ ನಗರದಲ್ಲೂ ಸಂಜೆ ಸುಮಾರು ಒಂದು ಗಂಟೆ ಮಳೆಯಾಗಿದೆ. ಗಾಳಿ–ಮಳೆಯಿಂದಾಗಿ ಮರ­ಗಳು, ವಿದ್ಯುತ್‌ ಕಂಬಗಳು ಧರೆಗುರುಳಿ ಹೊನ್ನಾಳಿ ತಾಲ್ಲೂಕಿನ ಬಹುತೇಕ ಕಡೆ ಶುಕ್ರ­ವಾರ ರಾತ್ರಿ 9 ಗಂಟೆಯಿಂದ ಸತತ 17 ಗಂಟೆ ವಿದ್ಯುತ್‌ ವ್ಯತ್ಯಯವಾಯಿತು.

ಗೊಲ್ಲರಹಳ್ಳಿಯಲ್ಲಿನ ಶಾಸಕ ಡಿ.ಜಿ.­ಶಾಂತನ­ಗೌಡ ಅವರಿಗೆ ಸೇರಿದ ರೈಸ್‌ಮಿಲ್‌ಗೆ ಮಳೆ–ಗಾಳಿ­ಯಿಂದ ಹಾನಿಯಾಗಿದೆ.
ಫಸಲಿಗೆ ಬಂದಿದ್ದ ನೂರಾರು ಅಡಿಕೆ ಮರಗಳು ನಾಶವಾಗಿವೆ.

ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಹೊಳೆ­ಸಿರಿಗೆರೆ ಗ್ರಾಮದ ವ್ಯಾಪ್ತಿಯಲ್ಲಿ  ನೂರಾರು ಬಾಳೆ, ಅಡಿಕೆ, ತೆಂಗಿನಮರಗಳು ನೆಲಕ್ಕೆ ಉರು­ಳಿದ್ದು, ಭತ್ತದ ಬೆಳೆಗೆ ಹಾನಿ­ಯಾ­ಗಿದೆ, 30ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ ಹಾಗೂ ಮೂರು ವಿದ್ಯುತ್‌ ಪರಿವರ್ತಕಗಳಿಗೆ ಹಾನಿ­ಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಬಾಪೂಜಿನಗರ (ಉದ್ದ­ಗಟ್ಟೆ ದೊಡ್ಡತಾಂಡಾ) ಗ್ರಾಮದಲ್ಲಿ 8 ಮನೆ­ಗಳಿಗೆ ಮಳೆ ನೀರು ನುಗ್ಗಿದೆ.  ಸುಮಾರು ರೂ. 8 ಲಕ್ಷಕ್ಕೂ ಅಧಿಕ ಮೊತ್ತದ ಸ್ಥಿರಾಸ್ತಿ ಹಾಗೂ ದವಸ– ಧಾನ್ಯ ಸೇರಿದಂತೆ ವಿವಿಧ ಸಾಮಗ್ರಿ ಮಳೆ ನೀರಿನಲ್ಲಿ ಕೊಚ್ಚಿಹೋಗಿವೆ.

ಚಿತ್ರದುರ್ಗ ವರದಿ: ಧರ್ಮಪುರ ಹೋಬಳಿಯ ಸುತ್ತ­ಮುತ್ತ ಆಲಿಕಲ್ಲು ಮಳೆಯಿಂದ ಅಪಾರ ನಷ್ಟ ಸಂಭವಿಸಿದ್ದು, ರೈತರ ಸ್ಥಿತಿ ಶೋಚ­ನೀಯ­ವಾಗಿದೆ.

ಹರಿಯಬ್ಬೆ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಸುಮಾರು 40 ಎಕರೆ ಪ್ರದೇಶದ ಅಡಿಕೆ ಗಿಡಗಳು ನೆಲಕ್ಕುರುಳಿವೆ. ಇದೇ ಗ್ರಾಮದಲ್ಲಿ 300 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಆಲಿಕಲ್ಲು ಹೊಡೆತಕ್ಕೆ ನಾಶವಾಗಿದೆ. ದಾಳಿಂಬೆ ಗಿಡಗಳು ನೆಲಕಚ್ಚಿದೆ. ರಾಗಿ, ಭತ್ತ ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಮಾರು ರೂ. 6 ಕೋಟಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ರಂಗೇನಹಳ್ಳಿ, ಶ್ರವಣ­ಗೆರೆ­ಯಲ್ಲೂ ಆಲಿಕಲ್ಲು ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ­ಹಾನಿಯಾಗಿದೆ.

ಪಾಂಡವಪುರ ವರದಿ: ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ಅಪಾರ ನಷ್ಟ ಉಂಟಾಗಿದ್ದು, ಹುಲ್ಕೆರೆ ಗ್ರಾಮದಲ್ಲಿ ಸತೀಶ್‌ ಎಂಬುವವರಿಗೆ ಸೇರಿದ ಸುಮಾರು 2,500 ಕೋಳಿ ಮರಿಗಳು ಸಾವನ್ನಪ್ಪಿವೆ. ಅಲ್ಲದೇ, ಸುಮಾರು 8 ಎಕರೆಯಷ್ಟು ಬೀನ್ಸ್‌ ಬೆಳೆ ಹಾನಿಯಾಗಿದೆ. ಗ್ರಾಮದಲ್ಲಿ ತೋಟದ ಬೆಳೆ ಬೆಳೆಯುವ ರೈತರೇ ಹೆಚ್ಚಾಗಿದ್ದು, ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆ ನಷ್ಟ ಉಂಟಾಗಿರುವುದರಿಂದ ಕಂಗಾಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT