ಮೂಡುಬಿದಿರೆ: ‘ಸಾಹಿತ್ಯದಲ್ಲಿ ಅಸ್ಪೃಶ್ಯತೆ ಹಾಗೂ ಸ್ವದೇಶಕ್ಕೆ ಸೀಮಿತ ಎಂಬ ಚಿಂತನೆ ಬೇಡ ಎಂದು ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು. ಇಲ್ಲಿನ ರತ್ನಾಕರವರ್ಣಿ ವೇದಿಕೆಯಲ್ಲಿ ಭಾನುವಾರ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013'ರ ಸಮಾರೋಪ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಮತ್ತು 11 ಮಂದಿಗೆ 'ಆಳ್ವಾಸ್ ವಿಶ್ವನುಡಿಸಿರಿ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.
‘ಬರವಣಿಗೆಯೇ ಇಲ್ಲದ ಭಾಷೆಯಲ್ಲೂ ಹೋಮರ್ನಂತಹ ಮಹಾಕವಿ ಹುಟ್ಟುತ್ತಾನೆ. ಬೇರೆ ಭಾಷೆಗಳ ಪದಗಳನ್ನು ಸೇರಿಸಿ ಕನ್ನಡವನ್ನು ಮಹಾ ವೃಕ್ಷವನ್ನಾಗಿಸಬೇಕು. ವಿಕಾಸವೇ ನಿಜವಾದ ಬದುಕು. ನಾವೆಲ್ಲ ಕನ್ನಡ ಸಮಾಜ ಕಟ್ಟಬೇಕು. ಸಮಾಜ ಮುರಿಯುವ ಕೆಲಸ ಬೇಡ' ಎಂದರು. ‘ಜಾಗತೀಕರಣವು ಸಾಂಸ್ಕೃತಿಕ ಅನನ್ಯತೆಯ ಭಾಗವಾಗಬೇಕೇ ಹೊರತು ಪ್ರತ್ಯೇಕತೆಗೆ ಎಡೆ ಮಾಡಿಕೊಡಬಾರರು ಎಂದು ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ವಿಶ್ವ ನುಡಿಸಿರಿಯ ಸರ್ವಾಧ್ಯಕ್ಷ ಡಾ.ಬಿ.ಎ.ವಿವೇಕ ರೈ, ಸಮ್ಮೇಳನದ ರೂವಾರಿ ಡಾ.ಎಂ.ಮೋಹನ ಆಳ್ವ ಇತರರು ಇದ್ದರು. ಸಾಂಸ್ಕೃತಿಕ ಜಾತ್ರೆ: ನಾಲ್ಕು ದಿನಗಳ ಕಾಲ ವಿದ್ಯಾಗಿರಿಯಲ್ಲಿ ಮೇಳೈಸಿದ ಸಾಂಸ್ಕೃತಿಕ ಜಾತ್ರೆ ಭಾನುವಾರ ರಾತ್ರಿ ಸಂಪನ್ನಗೊಂಡಿತು.
ನುಡಿಸಿರಿಗೆ ಹತ್ತು ಹಾಗೂ ವಿರಾಸತ್ಗೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ 'ನುಡಿ- ಕಲಾ ಜಾತ್ರೆ' ಈ ಬಾರಿ ವಿಶ್ವರೂಪ ಪಡೆದಿತ್ತು. ಕೃಷಿ ಜಾತ್ರೆ ಹಾಗೂ ಜಾನಪದ ಜಾತ್ರೆಗಳು ಹಬ್ಬಕ್ಕೆ ವಿಶೇಷ ಮೆರುಗು ತಂದಿದ್ದವು. ಒಂಬತ್ತು ವೇದಿಕೆಗಳಲ್ಲಿ ನಡೆದ ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ವರ್ಗದ ಜನರನ್ನು ಆಕರ್ಷಿಸಿದವು. ನಾಡಿನ ಹಿರಿಯ ಸಾಹಿತಿ ಹಾಗೂ ವಿದ್ವಾಂಸರ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ಆಲಿಸುವ ಅವಕಾಶ ಲಭಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.