ADVERTISEMENT

ನೋಯಿಸದೆ ಬರೆಯಲು ಸಾಧ್ಯವಿಲ್ಲ- ಅನಂತಮೂರ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ಬೆಂಗಳೂರು: `ಯಾರನ್ನೂ ನೋಯಿಸದೇ ಏನನ್ನೂ ಬರೆಯಲು ಸಾಧ್ಯವಿಲ್ಲ. ನೋಯಿಸಿದನೆಂದು ಒಬ್ಬ ಲೇಖಕನನ್ನು ಜೈಲಿಗೆ ಅಟ್ಟುವುದು ತರವಲ್ಲ' ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಪ್ರತಿಕ್ರಿಯೆ ನೀಡಿದರು.

ತಮ್ಮ ಗೌರವ ಮಾಲಿಕೆ  ಕೃತಿಗಳ ಭಾಗವಾಗಿ ಅಭಿನವ ಪ್ರಕಾಶನವು ಇಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯನಾಥ ಶೆಣೈ ಅವರ `ಪತ್ರ ವಾತ್ಸಲ್ಯ', ಬಸವರಾಜ ಕಲ್ಗುಡಿ ಅವರ `ಮೈಯೇ ಸೂರು ಮನವೇ ಮಾತು', ಕೆ.ಪಿ.ಭಟ್ ಅವರ `ಭಾಷೆ ಮತ್ತು ಸಾಮಾಜಿಕ ಸಂದರ್ಭ' ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

`ಬ್ರಾಹ್ಮಣ್ಯ, ವೇದ, ಉಪನಿಷತ್ತುಗಳನ್ನೆಲ್ಲ ತಿರಸ್ಕರಿಸಿದ ಬಸವಣ್ಣ ಕೂಡ ಒಂದು ವರ್ಗವನ್ನು ನೋಯಿಸಿದ್ದ. ರಾಜಾರಾಂ ಮೋಹನರಾಯ್ ಕೂಡ ಬಂಗಾಳಿ ಬ್ರಾಹ್ಮಣರ ಹಲವು ಆಚರಣೆಗಳನ್ನು ವಿರೋಧಿಸಿದ್ದರು. ಸರಿಯಲ್ಲ ಅನಿಸಿದ್ದನ್ನು ವಿರೋಧಿಸಿಯೇ ನಾನು ಕೂಡ ಹಲವು ಕೃತಿಗಳನ್ನು ರಚಿಸಿದ್ದೇನೆ. ಲೇಖಕ ನೋಯಿಸುತ್ತಾನೆಂದು ಜೈಲಿಗೆ ತಳ್ಳುವುದಾದರೆ, ಬಸವಣ್ಣ, ಅಷ್ಟೇಕೇ, ನನ್ನನ್ನೂ ಜೈಲಿಗೆ ಹಾಕಬೇಕಿತ್ತು' ಎಂದು ಪ್ರತಿಪಾದಿಸಿದರು.

`ಢುಂಢಿಯನ್ನು ನಾನು ಓದಿಲ್ಲ. ಹಾಗಾಗಿ ಓದದೇ ಏನನ್ನು ಹೇಳಲು ಸಾಧ್ಯವಿಲ್ಲ. ಆದರೆ, ಒಂದು ಕೃತಿಯಲ್ಲಿರುವ ಒಳಿತು-ಕೆಡಕುಗಳ ಬಗ್ಗೆ ಚರ್ಚೆ ನಡೆಸಲೆಂದೇ ವಿಮರ್ಶಾ ಲೋಕವಿದೆ. ನೋಯಿಸಿದನೆಂದು ಒಬ್ಬ ಲೇಖಕನನ್ನು ಪೊಲೀಸರ ಕೈಗಿಡುವುದು ಪ್ರಜಾಪ್ರಭುತ್ವದ ಆಶಯಕ್ಕೆ ಭಂಗ ತರುತ್ತದೆ. ಪ್ರಗತಿಪರ ಚಿಂತನೆಗೆ ಒಡ್ಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ನೇತೃತ್ವದ ಗೃಹ ಸಚಿವರು ಕನಿಷ್ಠ ಈ ವಿಚಾರದಲ್ಲಿ ಕಾಳಜಿ ವಹಿಸಬೇಕಿತ್ತು' ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.