ADVERTISEMENT

ಪಂಚಭೂತಗಳಲ್ಲಿ `ಪಿಬಿಎಸ್' ಲೀನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಚೆನ್ನೈ (ಪಿಟಿಐ): ಭಾನುವಾರ ನಿಧನ ಹೊಂದಿದ ಖ್ಯಾತ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ಅಂತ್ಯಸಂಸ್ಕಾರ ಸೋಮವಾರ ಚೆನ್ನೈನಲ್ಲಿ ನೆರವೇರಿತು.
ಸಾವಿರಾರು ಅಭಿಮಾನಿಗಳು ಪಿಬಿಎಸ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಮೇರು ಗಾಯಕನಿಗೆ ನಮನ ಸಲ್ಲಿಸಿದರು.

ಕಣ್ಣಮ್ಮಪೇಟೆಯ ಸ್ಮಶಾನದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಬಹುಭಾಷಾ ಗಾಯಕನ ಅಂತ್ಯಸಂಸ್ಕಾರ ನೇರವೇರಿತು. ಪಿಬಿಎಸ್ ಹಿರಿಯ ಮಗ, ಮಂತ್ರ ಪಠಣಗಳ ನಡುವೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ ಹಾಗೂ ಚೆನ್ನೈ ಮೇಯರ್ ಸೈದೆ ದುರೈಸ್ವಾಮಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಭಾರತದ ಹಿರಿಯ ಹಿನ್ನೆಲೆ ಗಾಯಕಿಯರಾದ ವಾಣಿ ಜಯರಾಮ್, ಪಿ.ಸುಶೀಲಾ ಮತ್ತು ಎಸ್.ಜಾನಕಿ ಅವರು, ತಮ್ಮ ವೃತ್ತಿ ಜೀವನದ ಸಹೋದ್ಯೋಗಿಯ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ವಿದ್ಯುತ್ ಚಿತಾಗಾರದ ಬದಲಿಗೆ ಕಟ್ಟಿಗೆಯನ್ನು ಬಳಸಿ ಅಂತ್ಯಸಂಸ್ಕಾರ ನಡೆಸಲು ಪಿಬಿಎಸ್ ಕುಟುಂಬದ ಸದಸ್ಯರು ನಿರ್ಧರಿಸಿದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

`ಪಿಬಿಎಸ್' ಎಂದೇ ಖ್ಯಾತರಾಗಿದ್ದ ಪ್ರತಿವಾದಿ ಭಯಂಕರ ಶ್ರೀನಿವಾಸ್, ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಮನೆಮಾತಾಗಿದ್ದರು.
ಪಿಬಿಎಸ್ ಅವರು ಕನ್ನಡ ಹಾಗೂ ತಮಿಳು ಚಿತ್ರರಂಗಗಳ ಮೇರು ಕಲಾವಿದರಾದ ಡಾ. ರಾಜ್‌ಕುಮಾರ್ ಹಾಗೂ ಜೆಮಿನಿ ಗಣೇಶನ್ ಅವರ ಶಾರೀರವಾಗಿದ್ದರು.

ರಾಜ್‌ಕುಮಾರ್-ಪಿಬಿಎಸ್ ಮತ್ತು ಜೆಮಿನಿ ಗಣೇಶನ್-ಪಿಬಿಎಸ್ ಜೋಡಿ ಎರಡೂ ಚಿತ್ರರಂಗಗಳಿಗೆ ಹಲವು ಸುಮಧುರ ಹಾಡುಗಳನ್ನು ನೀಡಿತ್ತು.ಆಂಧ್ರಪ್ರದೇಶ ಮೂಲದವರಾದ ಪಿಬಿಎಸ್ ಅವರು ಕೊನೆಯ ಬಾರಿ  ಅಂದರೆ, 2010ರಲ್ಲಿ  `ಅಯಿರಾತಿಲ್ ಒರುವನ್' ಎಂಬ ತಮಿಳು ಚಿತ್ರಕ್ಕೆ ಹಿನ್ನೆಲೆ ಗಾಯಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT