ADVERTISEMENT

ಪಕ್ಷದ ನಿರ್ಣಯಕ್ಕೆ ಬಿಟ್ಟಿದ್ದು: ದೇವೇಗೌಡ

ಜೆಡಿಎಸ್-ಬಿಎಸ್‌ಆರ್ ಕಾಂಗ್ರೆಸ್ ಮೈತ್ರಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST
ಪಕ್ಷದ ನಿರ್ಣಯಕ್ಕೆ ಬಿಟ್ಟಿದ್ದು: ದೇವೇಗೌಡ
ಪಕ್ಷದ ನಿರ್ಣಯಕ್ಕೆ ಬಿಟ್ಟಿದ್ದು: ದೇವೇಗೌಡ   

ಸವದತ್ತಿ: `ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ,  ಮೈತ್ರಿ ಕುರಿತು ಇನ್ನೂ ಅಂತಿಮ ನಿರ್ಣಯಕ್ಕೆ ಬಂದಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ  ಹೇಳಿದರು.

ಸವದತ್ತಿಯ ನವಿಲುತೀರ್ಥ ಜಲಾಶಯಕ್ಕೆಸೋಮವಾರ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಪಕ್ಷ ನಿರ್ಣಯಿಸಲಿದೆ ಎಂದರು.  ಮೂರು ದಿನದೊಳಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ದೇವೇಗೌಡರು ತಿಳಿಸಿದರು.

ಜಲಾಶಯಗಳಿಗೆ ಭೇಟಿ: `ರಾಜ್ಯದಲ್ಲಿನ ಎಲ್ಲ ಜಲಾಶಯಗಳಿಗೆ ಭೇಟಿ ಮಾಡುವುದರೊಂದಿಗೆ ಆ ಭಾಗದ ರೈತರ, ನಾಗರಿಕರ ಸಮಸ್ಯೆಗಳ ಕುರಿತು ಅರಿಯುವುದು ನನ್ನ ಬದುಕಿನ ಕೊನೆಯ ಆಸೆಯಾಗಿದೆ. ರೈತರ, ಕೃಷಿ ಕೂಲಿಕಾರ್ಮಿಕರ ಹಿತಕ್ಕಾಗಿ, ಅವರೆಲ್ಲರ ಬದುಕಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಕೊನೆ ಉಸಿರು ಇರುವವರೆಗೆ ಹೊರಾಡುತ್ತೇನೆ' ಎಂದು ದೇವೇಗೌಡ ಹೇಳಿದರು.
ಆಲಮಟ್ಟಿ ಜಲಾಶಯಕ್ಕೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ಕಳಸಾ-ಬಂಡೂರಿ ಯೋಜನೆ ರಾಜ್ಯಕ್ಕೆ ಅತ್ಯಗತ್ಯವಾಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.