ADVERTISEMENT

`ಪಕ್ಷ ಬದ್ಧತೆ ಅಭ್ಯರ್ಥಿಯ ಮಾನದಂಡ'

ಅಧಿಕಾರದ ಗುಂಗು, ಅಖಾಡದಲ್ಲಿ ರಂಗು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ಹುಬ್ಬಳ್ಳಿ: `ಅಭ್ಯರ್ಥಿಗಳ ಆಯ್ಕೆಗೆ ಪಕ್ಷಕ್ಕೆ ಬದ್ಧರಾಗಿರಬೇಕು ಮತ್ತು ಗೆಲ್ಲುವ ಸಾಮರ್ಥ್ಯ ಹೊಂದಿರಬೇಕು. ಇದು ನಮ್ಮ ಪಕ್ಷದ ಮಾನದಂಡ. ಅಂಥವರಿಗೆ ಮಾತ್ರ ಪಕ್ಷದ ಟಿಕೆಟ್' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಪುನರುಚ್ಚರಿಸಿದರು.

`ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಇದೇ 16ರವರೆಗೂ ಚರ್ಚೆ ಮುಂದುವರಿಯಲಿದೆ' ಎಂದು ಅವರು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

`ಈಗಾಗಲೇ 150ರಿಂದ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ನಿಟ್ಟಿನಲ್ಲಿ ಆಕಾಂಕ್ಷಿಗಳ ಜೊತೆ ಮಾತುಕತೆ ನಡೆಸಲು ಮೈಸೂರು, ಮಂಡ್ಯ ಭಾಗಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬೆಂಗಳೂರು, ರಾಮನಗರ ಸುತ್ತಮುತ್ತ ಉಪ ಮುಖ್ಯಮಂತ್ರಿ ಆರ್. ಅಶೋಕ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್, ಶಿವಮೊಗ್ಗ ಭಾಗಕ್ಕೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಗುಲ್ಬರ್ಗ, ಬೀದರ್, ರಾಯಚೂರು ಭಾಗದಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಧಾರವಾಡ, ಬೆಳಗಾವಿ ಭಾಗದ ಕಡೆಗೆ ಮುಖ್ಯಮಂತ್ರಿ ಮತ್ತು ನಾನು ಗಮನಹರಿಸಿದ್ದೇವೆ' ಎಂದರು.

5ರಂದು ಪಟ್ಟಿ ಬಿಡುಗಡೆ: `ಇದೇ 4ರಂದು ಪಟ್ಟಿ ಸಿದ್ಧಪಡಿಸಿ ಅದೇ ದಿನ ರಾತ್ರಿ ಪಟ್ಟಿಯನ್ನು ಅಂತಿಮ ತೀರ್ಮಾನಕ್ಕೆ ಪಕ್ಷದ ವರಿಷ್ಠರಿಗೆ ಕಳುಹಿಸಿ ಕೊಡಲಾಗುವುದು. 5 ರಂದು ಸಂಜೆ ಪಟ್ಟಿ ಬಿಡುಗಡೆ ಆಗಲಿದೆ' ಎಂದರು.

`ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಅವರು ಪಕ್ಷ ಬಿಡುವುದು ಮೊದಲೇ ಗೊತ್ತಿತ್ತು. ಹೀಗಾಗಿ ನಾವು ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ನಮ್ಮ ಪಟ್ಟಿಯ್ಲ್ಲಲಿ ಅವರು ಇರಲೂ ಇಲ್ಲ' ಎಂದು ಜೋಶಿ ಪ್ರತಿಕ್ರಿಯಿಸಿದರು.

ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮೋಹನ ಲಿಂಬಿಕಾಯಿ, ಶಿವರಾಜ ಸಜ್ಜನ್ ಅವರನ್ನು ಅನರ್ಹಗೊಳಿಸುವ ಸಂಬಂಧ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಮುಖಭಂಗ ತಪ್ಪಿಸಿಕೊಳ್ಳಲು ಅವರಿಬ್ಬರೂ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಇರಲು ಇಷ್ಟವಿಲ್ಲ ಎಂದ ಮೇಲೆ ಬಿಟ್ಟು ಹೋಗಬೇಕು. ಈಗಲಾದರೂ ರಾಜೀನಾಮೆ ಕೊಟ್ಟರಲ್ಲ. ಒಳ್ಳೆಯದೇ ಆಯಿತು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.