ರಾಮನಗರ: ವ್ಯಕ್ತಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸತೀಶ್ (35), ಮಂಜುಳಾ ಹಾಗೂ ಅವರ ಮಕ್ಕಳಾದ ವಿಜಯ್ (5), ಶ್ರೇಯಾ (3) ಮೃತರು. ಸತೀಶ್ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಅವರ ಪತ್ನಿ ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಕುಟುಂಬದವರು ಬುಧವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದು, ಗುರುವಾರ ಮುಂಜಾನೆ 9 ಗಂಟೆಯಾದರೂ ಮನೆಯ ಬಾಗಿಲು ತೆರೆದಿಲ್ಲ.
ಮಂಜುಳಾರ ತಾಯಿ ಹಾಗೂ ಸಹೋದರಿ ಸಮೀಪದಲ್ಲಿಯೇ ಮನೆ ಮಾಡಿಕೊಂಡಿದ್ದು, ಬೆಳಿಗ್ಗೆಯಾದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಮನೆಗೆ ಬಂದು ಕಿಟಕಿ ಮೂಲಕ ನೋಡಿದ್ದಾರೆ. ಈ ಸಂದರ್ಭ ಛಾವಣಿಯಲ್ಲಿ ಸತೀಶ್ ಶವ ನೇತಾಡುತ್ತಿರುವುದು ಕಂಡು ಬಂತು. ಬಾಗಿಲು ಒಡೆದು ಒಳಹೋದ ಬಳಿಕ ಉಳಿದ ಮೂವರೂ ಮೃತಪಟ್ಟಿರುವುದು ಕಂಡುಬಂತು ಎಂದು ಕುಂಬಳಗೋಡು ಠಾಣೆ ಪೊಲೀಸರು ತಿಳಿಸಿದರು.
ಸತೀಶ್ ತನ್ನ ಪತ್ನಿ ಹಾಗೂ ಮಕ್ಕಳನ್ನು ಟವಲ್ನಿಂದ ಗುತ್ತಿಗೆಗೆ ಬಿಗಿದು ಕೊಂದು ಬಳಿಕ ತಾನೂ ಆತ್ಮಹತ್ಮೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶವಗಳ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.