ಬಾಳೆಹೊನ್ನೂರು: ಪರೀಕ್ಷೆಗೆಂದು ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಘಟನೆ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಕೆಇಬಿ ಕಾಲೊನಿಯಲ್ಲಿ ಹತ್ತನೇ ತರಗತಿ ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಬಲವಂತವಾಗಿ ಮನೆಗೆ ಕರೆದೊಯ್ದ ರಾಜು (46) ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿ ಮನೆಯಲ್ಲಿ ಏಕಾಂಗಿಯಾಗಿರುವುದನ್ನು ಗಮನಿಸಿ ಈ ಕೃತ್ಯ ಎಸಗಿದ್ದಾನೆ. ರಾಜುವಿಗೆ ವಿವಾಹವಾಗಿದ್ದು ಪತ್ನಿ, ಮಕ್ಕಳು ಇದ್ದಾರೆ. ಈತನ ಮನೆಯಲ್ಲೂ ಯಾರು ಇರಲಿಲ್ಲ.ವಿದ್ಯಾರ್ಥಿನಿ ಕೂಗಿಕೊಂಡರೆ ಬೇರೆಯವರಿಗೆ ಕೇಳಿಸದಂತೆ ಟಿ.ವಿ. ಹಾಕಿ ಶಬ್ದ ಹೆಚ್ಚು ಮಾಡಿದ್ದ.
ಆದರೂ ವಿದ್ಯಾರ್ಥಿನಿ ಕೂಗಿದ ಶಬ್ದ ಕೇಳಿದ ಪಕ್ಕದ ಮನೆಯ ಸಚಿನ್, ಇತರ ಸಹಪಾಠಿಗಳ ಜತೆ ರಾಜು ಮನೆಗೆ ತೆರಳಿದ. ಆ ವೇಳೆ ಅತ್ಯಾಚಾರ ನಡೆದೇ ಇಲ್ಲ ಎಂಬಂತೆ ಆತ ವರ್ತಿಸಿದ. ಆದರೆ ಸಚಿನ್ ಮತ್ತು ಸಹಪಾಠಿಗಳು ಠಾಣೆಗೆ ತೆರಳಿ ದೂರು ನೀಡಿದರು.
ನಂತರ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದರು. ಈ ವೇಳೆ ಬೈಕ್ ಹತ್ತಿ ಪರಾರಿಯಾಗಲು ಯತ್ನಿಸಿದ ರಾಜುನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಈತ ಪೊಲೀಸರ ವಶದಲ್ಲಿದ್ದಾನೆ.
ಅತ್ಯಾಚಾರ ಎಸಗಿರುವುದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿ ಇನ್ನೂ ಪರೀಕ್ಷೆ ಬರೆಯಬೇಕಾಗಿರುವುದರಿಂದ ಪೊಲೀಸ್ ವರಿಷ್ಠಾಧಿಕಾರಿ ಅನುಮತಿ ಪಡೆದು ಗುರುವಾರ ಕ್ರಮ ಕೈಗೊಳ್ಳಲು ಪೊಲೀಸರು ತೀರ್ಮಾನಿಸಿದ್ದಾರೆ. ಡಿವೈಎಸ್ಪಿ ರಾಮಚಂದ್ರ ನಾಯಕ್, ಠಾಣಾಧಿಕಾರಿ ಮಂಜುನಾಥ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣ ಇದ್ದರು.
ಮಾನಸಿಕ ಬೆಂಬಲ: ಅತ್ಯಾಚಾರದಿಂದ ಘಾಸಿಗೊಂಡಿರುವ ವಿದ್ಯಾರ್ಥಿನಿಗೆ ಮಾನಸಿಕ ಬೆಂಬಲ ನೀಡಲು ವಿದ್ಯಾರ್ಥಿನಿ ಶಾಲೆಯ ಶಿಕ್ಷಕರು ಆಕೆ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. ಅತ್ಯಾಚಾರ ಘಟನೆಯಿಂದ ಈ ಭಾಗದ ಪೋಷಕರು ಆತಂಕಗೊಂಡಿದ್ದಾರೆ.ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.