ADVERTISEMENT

ಪರ್ಸೆಂಟೇಜ್‌ ಲೆಕ್ಕದಲ್ಲಿ ಹಣ ಲೂಟಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ‘ಜನರ ದುಡ್ಡನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳು ಪರ್ಸೆಂಟೇಜ್‌ ಲೆಕ್ಕದಲ್ಲಿ ಲೂಟಿ ಮಾಡುತ್ತಿವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನದ್ದು ಹತ್ತು ಪರ್ಸೆಂಟ್‌ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿ
ದರೆ, ಕೇಂದ್ರದ್ದು ತೊಂಬತ್ತು ಪರ್ಸೆಂಟ್‌ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರುತ್ತಾರೆ. ಸರ್ಕಾರ
ಗಳು ಜನರ ಎಷ್ಟು ಪರ್ಸೆಂಟ್‌ ದುಡ್ಡನ್ನು ದೋಚುತ್ತಿವೆ ಎಂದು ಇಬ್ಬರಿಗೂ ಗೊತ್ತು’ ಎಂದು ಕಿಡಿ ಕಾರಿದರು.

‘ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟೀ ಕುಡಿಯುವುದು, ಮಿರ್ಚಿ ತಿನ್ನುವುದೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಎಂಬಂತಾಗಿದೆ. ರಾಹುಲ್‌, ಮೋದಿ ಸೇರಿದಂತೆ ಇಲ್ಲಿಗೆ ಬಂದ ವರಿಷ್ಠರು ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುತ್ತಿದ್ದಾರೆಯೇ ಹೊರತು, ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜೆಡಿಎಸ್‌ಗೆ ಪೂರ್ಣ ಅಧಿಕಾರ ನೀಡಿದರೆ ಆಡಳಿತದಲ್ಲಿ ಪರ್ಸೆಂಟೇಜ್‌ ದುರಭ್ಯಾಸವನ್ನು ವಿಧಾನಸೌಧದಿಂದಲೇ ತೊಲಗಿಸುವುದಾಗಿ ಹೇಳಿದ ಅವರು, ಎಲ್ಲಾ ರೈತರ ಎಲ್ಲ ಬಗೆಯ ಸಾಲವನ್ನು ಯಾವುದೇ ಷರತ್ತಿಲ್ಲದೆ ಒಂದೇ ದಿನದಲ್ಲಿ ಮನ್ನಾ ಮಾಡುವುದಾಗಿ ಭರವಸೆ ನೀಡಿದರು.

‘ಲಕ್ಷಾಂತರ ಮನೆಗಳನ್ನು ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುತ್ತಾರೆ. ಆದರೆ, ಅವರ ಕ್ಷೇತ್ರದ ಪರಿಶಿಷ್ಟ ಸಮುದಾಯದ ವ್ಯಕ್ತಿಯೊಬ್ಬರು ಸ್ವಂತ ಮನೆಯಲ್ಲಿ ಸಾಯುವ ಇಚ್ಛೆ ವ್ಯಕ್ತಪಡಿಸಿ ಶನಿವಾರ ಮೈಸೂರಿನಲ್ಲಿ ನನಗೆ ಅರ್ಜಿ ಕೊಟ್ಟರು. ಪರಿಸ್ಥಿತಿ ಹೀಗಿದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.