ADVERTISEMENT

ಪಶ್ಚಿಮ ಕರಾವಳಿ: ಮುಂಗಾರು ಚುರುಕು

ಕೇರಳ, ಕರ್ನಾಟಕ, ಮಹಾರಾಷ್ಟ್ರದ ಹಲವೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:43 IST
Last Updated 7 ಜೂನ್ 2018, 19:43 IST
ಮುಂಬೈನ ರಸ್ತೆಯೊಂದರಲ್ಲಿ ನಿಂತಿದ್ದ ಮಳೆನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳ ಸಂಭ್ರಮ –ಪಿಟಿಐ ಚಿತ್ರ
ಮುಂಬೈನ ರಸ್ತೆಯೊಂದರಲ್ಲಿ ನಿಂತಿದ್ದ ಮಳೆನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳ ಸಂಭ್ರಮ –ಪಿಟಿಐ ಚಿತ್ರ   

ಬೆಂಗಳೂರು: ಉತ್ತರ ಕರ್ನಾಟಕ, ಕೊಡಗು ಹಾಗೂ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಂದಲೇ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮಳೆಯಿಂದಾಗಿ ಜಮೀನು ಹದಗೊಂಡಿದ್ದು, ಕೃಷಿಕರು ಈಗಾಗಲೇ ಭತ್ತದ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರಕ್ಕೆ ನೀರು ಪೂರೈಸುವ ನೇತ್ರಾವತಿ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುರುವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು.

ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಗುರುವಾರ ದಿನವಿಡೀ ಮಳೆ ಸುರಿಯಿತು. ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಯ ರೋಣ, ನರಗುಂದದಲ್ಲಿ ಗುರುವಾರ ಉತ್ತಮ ಮಳೆ ಆಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಲಂಡೂರಿ ಹಳ್ಳ ಮೈದುಂಬಿ ಹರಿಯಿತು.

ADVERTISEMENT

ಸಿಡಿಲು ಬಡಿದು ಕುರಿಗಾಹಿ ಸಾವು: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೋರಗಲ್ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ಗ್ರಾಮದ ಕುರಿಗಾಹಿ ವಿಠಲ ಮೆಕ್ಕಳಕಿ (50) ಮೃತ ಪಟ್ಟಿದ್ದಾರೆ.

(ತಿರುವನಂತಪುರ, ಮುಂಬೈ ವರದಿ): ಕೇರಳದಲ್ಲಿ ಮುಂಗಾರು ಚುರುಕುಗೊಂಡಿದ್ದು, ರಾಜ್ಯದ ಹಲವು ನಗರಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ.

ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಇನ್ನೂ ಐದು ದಿನ ಉತ್ತಮ ಮಳೆಯಾಗಲಿದೆ. ಶುಕ್ರವಾರ ಕೇರಳ ಕರಾವಳಿ ಮತ್ತು ಲಕ್ಷದ್ವೀಪದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಬೈ ನಗರದಲ್ಲಿ ಗುರುವಾರ ಮುಂಗಾರು ಪೂರ್ವ ಮಳೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.