ADVERTISEMENT

ಪಾಟೀಲ ಪುಟ್ಟಪ್ಪ ಹೇಳಿಕೆ: ಚಂಪಾ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಧಾರವಾಡ:  `ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಡಾ. ಚಂದ್ರಶೇಖರ ಕಂಬಾರರು ಪ್ರಶಸ್ತಿಗೆ ಅರ್ಹರಲ್ಲ ಎಂದು ಡಾ. ಪಾಟೀಲ ಪುಟ್ಟಪ್ಪ ಹೇಳಿಕೆ ನೀಡಿರುವುದು ಸರಿಯಲ್ಲ. ಪಾಪು ಅವರು ಕಂಬಾರರ ಜೊತೆಗೆ ಡಾ. ಎಸ್.ಎಲ್.ಭೈರಪ್ಪ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಅವರಿಗೂ ಅವಮಾನ ಮಾಡಿದ್ದಾರೆ~ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಪಾಟೀಲ ಪುಟ್ಟಪ್ಪ ಅವರು ಕನ್ನಡದ ಯಜಮಾನರು. ಯಜಮಾನಿಕೆಯಿಂದ ಮಾತನಾಬೇಕಿತ್ತು. ಆದರೆ ಅವರ ದೊಡ್ಡತನ ಏನು ಎಂಬುದು ಈ ಹೇಳಿಕೆಯಿಂದಲೇ ಗೊತ್ತಾಗುತ್ತದೆ. ಇಂಥವರ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ~ ಎಂದರು.

`ಕಂಬಾರರು ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂದು ಹೇಳುವುದಾದರೆ, ಪಾಟೀಲ ಪುಟ್ಟಪ್ಪ ಸಹ ತಮಗೆ ದೊರೆತ ಪ್ರಶಸ್ತಿಗಳಿಗೆ ಲಾಬಿ ಮಾಡಿರಬಹುದು. ಕರ್ನಾಟಕ ರತ್ನ ಪ್ರಶಸ್ತಿಗೂ ಸಹ ಅವರು ಲಾಬಿ ಮಾಡಬಹುದು~ ಎಂದು ಚಂಪಾ ಕಟುಕಿದರು.

`ಡಾ. ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದಕ್ಕೆ ಎಲ್ಲರೂ ಅಭಿಮಾನ ಪಡಬೇಕು, ಅದರಲ್ಲೂ ಉತ್ತರ ಕರ್ನಾಟಕ ಭಾಗದವರು ಹೆಚ್ಚಿನ ಸಂತೋಷ ಪಡಬೇಕು~ ಎಂದ ಅವರು, `ಭೈರಪ್ಪ ಸಹ ಖ್ಯಾತ ಬರಹಗಾರರು. ಅವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಬೇಕು~ ಎಂದರು.

`ಪ್ರಶಸ್ತಿಗಾಗಿ ಶ್ರಮ ವಹಿಸುವ ಅಗತ್ಯವಿದೆ. ಅದನ್ನೇ ಲಾಬಿ ಎನ್ನಬಹುದು. ಪ್ರಶಸ್ತಿಗಾಗಿ ಒಳಸಂಚುಗಳು ನಡೆಯುತ್ತವೆ. ಇದನ್ನು ಯಾರೂ ಅಲ್ಲಗಳೆಯಲಾರರು~ ಎಂದು  ಚಂಪಾ ಹೇಳಿದರು.

ಹಿರಿಯ ಲೇಖಕ ಯಶವಂತ ಚಿತ್ತಾಲ ಅವರನ್ನು ಕಡೆಗಣಿಸಲಾಗಿದೆ. ಇವರಿಗೆ ಬರಬೇಕಾದ ಪ್ರಶಸ್ತಿಗಳು ಬಂದಿಲ್ಲ ಎಂಬ ನೋವು ನಮಗಿದೆ. ಇಂಥವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಬೇಕು ಎಂದ ಅವರು, ಇದಕ್ಕಾಗಿ ಅಗತ್ಯಬಿದ್ದರೆ ತಾವು ಲಾಬಿ ಮಾಡಲು ಸಿದ್ಧ ಎಂದರು. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಡಿ.ಎಂ.ಹಿರೇಮಠ. ಡಾ. ಹೇಮಾ ಪಟ್ಟಣಶೆಟ್ಟಿ, ಡಾ. ಲಿಂಗರಾಜ ಅಂಗಡಿ, ಶಿವಶಂಕರ ಹಿರೇಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.