ADVERTISEMENT

ಪಾಲಿಕೆ ವ್ಯಾಪ್ತಿಯಲ್ಲಿ ನಗರ ಸೇವೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 17:35 IST
Last Updated 18 ಫೆಬ್ರುವರಿ 2011, 17:35 IST
ಪಾಲಿಕೆ ವ್ಯಾಪ್ತಿಯಲ್ಲಿ ನಗರ ಸೇವೆ
ಪಾಲಿಕೆ ವ್ಯಾಪ್ತಿಯಲ್ಲಿ ನಗರ ಸೇವೆ   

ಬೆಂಗಳೂರು: ‘ರಾಜ್ಯದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ನಗರ ಸಾರಿಗೆ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ನಂತರ ಉಳಿದ ಜಿಲ್ಲೆಗಳಲ್ಲೂ ನಗರ ಸಾರಿಗೆ ಸೇವೆ ಆರಂಭಿಸಲಾಗುವುದು’ ಎಂದು ಸಚಿವ ಆರ್.ಅಶೋಕ ಹೇಳಿದರು.

ಬೆಂಗಳೂರಿನಿಂದ ತಿರುಪತಿಗೆ ಸಂಚರಿಸುವ ನೂತನ ‘ಮರ್ಸಿಡಿಸ್ ಬೆಂಜ್’ ಮಲ್ಟಿ ಆಕ್ಸೆಲ್ ಬಸ್ ಸಂಚಾರಕ್ಕೆ ನಗರದಲ್ಲಿ ಶುಕ್ರವಾರ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

‘ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಕಲ್ಪಿಸುವ ಉದ್ದೇಶದಿಂದ ಗುಣಮಟ್ಟದ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಹಾಗೆಯೇ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಬಸ್ ಸಂಚಾರ ಆರಂಭಿಸಲಾಗುವುದು.  ಹಂತ ಹಂತವಾಗಿ ಜಿಲ್ಲಾ ಕೇಂದ್ರಗಳಲ್ಲೂ ನಗರ ಬಸ್ ಸಂಚಾರ ಸೇವೆ ಪ್ರಾರಂಭಿಸಲಾಗುವುದು’ ಎಂದರು.

‘ವಿಶ್ವದಲ್ಲೇ ಪ್ರತಿಷ್ಠಿತ ಮರ್ಸಿಡಿಸ್ ಬೆಂಜ್ ಕಂಪೆನಿಯ ಮಲ್ಟಿ ಆಕ್ಸೆಲ್ ಬಸ್ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಬೆಂಗಳೂರಿನಿಂದ ತಿರುಪತಿ ನಡುವೆ ಈ ಬಸ್ ಸಂಚರಿಸಲಿದೆ. ಸುಖಕರ ಹಾಗೂ ಸುರಕ್ಷಿತ ಪ್ರಯಾಣ ಸೇವೆ ಒದಗಿಸುವ ನಿಟ್ಟಿನಲ್ಲಿ ಬೆಂಜ್ ಕಂಪೆನಿ ಬಸ್ ಸೇವೆಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಸದ್ಯ ಬೆಂಜ್ ಕಂಪೆನಿಯ 30 ಬಸ್‌ಗಳು ಸಂಚರಿಸುತ್ತಿವೆ. ಮಲ್ಟಿ ಆಕ್ಸೆಲ್ ಬಸ್‌ಗಳ ಕಾರ್ಯಕ್ಷಮತೆ ಹಾಗೂ ಜನರ ಸ್ಪಂದನೆಯನ್ನು ಪರಿಗಣಿಸಿ ಎಷ್ಟು ಬಸ್‌ಗಳನ್ನು ಖರೀದಿಸಬೇಕು ಎಂಬುದನ್ನು ನಿರ್ಧರಿಸಲಾಗುವುದು. ಒಂದು ಮಲ್ಟಿ ಆಕ್ಸೆಲ್ ಬಸ್‌ನ ಮೌಲ್ಯ 85ರಿಂದ 90 ಲಕ್ಷ ರೂಪಾಯಿ’ ಎಂದು ಪ್ರತಿಕ್ರಿಯೆ ನೀಡಿದರು.

ಸಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ ಉಪಸ್ಥಿತರಿದ್ದರು. ಬೆಂಗಳೂರು- ತಿರುಪತಿ ನಡುವಿನ ಬೆಂಜ್  ಬಸ್ ಪ್ರಯಾಣ ದರ: ರಾತ್ರಿ ಪ್ರಯಾಣ- ರೂ 450 (ರಾತ್ರಿ 11.15). ಹಗಲಿನ ಪ್ರಯಾಣ- ರೂ 400.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.