ಬೆಳಗಾವಿ: ತಾವು ಜೀವನ ಚರಿತ್ರೆ ಬರೆದರೆ, ಅದಕ್ಕೆ ‘ಪ್ರಜಾಪ್ರಭುತ್ವದಲ್ಲಿ ನಾನು ಯಾರು?’ ( ‘ಇನ್ ಡೆಮಾಕ್ರಸಿ ವ್ಹೂ ಆ್ಯಮ್ ಐ?’ ) ಎಂಬ ಶೀರ್ಷಿಕೆ ನೀಡುವುದಾಗಿ ನಿವೃತ್ತ ಲೋಕಾಯುಕ್ತ, ನ್ಯಾ. ಸಂತೋಷ್ ಹೆಗ್ಡೆ ಸೋಮವಾರ ಇಲ್ಲಿ ತಿಳಿಸಿದರು.
ಇಲ್ಲಿನ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಿದ್ದ ‘ಸಿರಿಗನ್ನಡ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ವ್ಯಾಖ್ಯಾನವೇ ಬದಲಾಗಿದೆ ಎಂದು ವಿಷಾದಿಸಿದ ಅವರು, ‘ಇಂದು ಜನರ ಸೇವಕರು ಯಾರೂ ಇಲ್ಲ. ಅವರೆಲ್ಲ ಮಾಲೀಕರಾಗಿದ್ದಾರೆ. ಬ್ರಿಟಿಷರು ಬಿಟ್ಟು ಹೋದ ಸಿಂಹಾಸನಗಳಿಗಾಗಿ ರಾಜಕಾರಣಿಗಳು ಗುದ್ದಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಭಾಷೆ, ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ, ಅದರ ವೈವಿಧ್ಯಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ‘ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರಬರುವವರಿಗೆ ಹೂಮಾಲೆ ಹಾಕುವವರು ಇರುವಂಥ ಸಮಾಜದಲ್ಲಿ ನಾವಿದ್ದೇವೆ. ಸಮಾಜ ಎತ್ತ ಸಾಗುತ್ತಿದೆ?’ ಎಂದು ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
‘ಭ್ರಷ್ಟಾಚಾರದ ವಿರುದ್ಧ ಹೋರಾಡುವ ಅಧಿಕಾರವನ್ನು ಲೋಕಾಯುಕ್ತ ಸಂಸ್ಥೆಯಿಂದ ಕಿತ್ತುಕೊಳ್ಳಲಾಗಿದೆ. ಉಳಿದಿರುವ ಅಧಿಕಾರವನ್ನು ಬಳಸಿಕೊಂಡು ಸಂಸ್ಥೆಯು ಜನರಿಗೆ ನ್ಯಾಯ ಕೊಡಿಸಲಿ’ ಎಂದು ಆಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.