ADVERTISEMENT

`ಪ್ರಜಾಪ್ರಭುತ್ವ ಮೌಲ್ಯ ಅಳವಡಿಸಿ'

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 20:00 IST
Last Updated 3 ಸೆಪ್ಟೆಂಬರ್ 2013, 20:00 IST

ಮಂಗಳೂರು: ವಿದ್ಯಾರ್ಥಿ ಸಂಘಟನೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಜೆ.ಆರ್.ಲೋಬೊ ಇಲ್ಲಿ ಹೇಳಿದರು.

ನಗರದ ಪುರಭವನದಲ್ಲಿ ಮಂಗಳವಾರ ನಡೆದ ಮಂಗಳೂರಿನ ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಿಂಸೆ ಮೊದಲಾದ ಸಮಾಜಕಂಟಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು. ಸಂಸ್ಥೆ ಹಾಗೂ ಸಮಾಜದ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಆಳವಾದ ಅಧ್ಯಯನ ನಡೆಸಿ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಅಂಕ ಗಳಿಸುವುದರ ಜತೆಗೆ ಉತ್ತಮ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಪರಿಷತ್ ಉದ್ಘಾಟಿಸಿದ ಮಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಕಳ್ಳಿಗೆ ತಾರಾನಾಥ ಶೆಟ್ಟಿ, ಪದವಿ ಕಾಲೇಜುಗಳು ನಿರುದ್ಯೋಗಿಗಳನ್ನು ಸ್ಥಾಪಿಸುವ ಕಾರ್ಖಾನೆಗಳು ಆಗದಿರಲಿ. ಶಿಕ್ಷಣ ಸಂಸ್ಥೆಗಳು ಉದ್ಯೋಗ ಮಾರ್ಗದರ್ಶನದೊಂದಿಗೆ ಬದುಕು ನಿರ್ವಹಿಸುವ ಜ್ಞಾನ ನೀಡಬೇಕು ಎಂದರು.

ವಿದ್ಯಾರ್ಥಿ ಸಂಘ ಮತ್ತಿತರ ಸಂಘಟನೆಗಳಿಂದ ವ್ಯಕ್ತಿತ್ವ ವಿಕಸನ ಆಗಲು ಸಾಧ್ಯ. ಇಂದಿನ ಶೈಕ್ಷಣಿಕ ಸ್ಪರ್ಧೆಯ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆಗೂ ಮಹತ್ವ ನೀಡಬೇಕು. ಸರ್ಕಾರಿ ಕಾಲೇಜುಗಳೂ ಖಾಸಗಿ ಕಾಲೇಜುಗಳಿಗಿಂತಲೂ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುತ್ತಿವೆ ಎಂದರು.

ಕಾಲೇಜಿನ 'ತೇರು' ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಪ್ರಕಾಶ್ಚಂದ್ರ ಶಿಶಿಲ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕಾಲೇಜು ಪ್ರಾಚಾರ್ಯ ಪ್ರೊ.ಕೆ.ರಾಧಾಕೃಷ್ಣ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಪೃಥ್ವಿರಾಜ್ ಎ., ಉಪಾಧ್ಯಕ್ಷೆ ಯೋಗಿತಾ ಶೆಟ್ಟಿ, ಕಾರ್ಯದರ್ಶಿ ಸುಕೇಶ್ ಬಿ., ಜತೆ ಕಾರ್ಯದರ್ಶಿಗಳಾದ ಶಿಲ್ಪಾ, ಭವ್ಯಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.