ದಾವಣಗೆರೆ : ‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸಿರುವ ಬಗ್ಗೆ ಇನ್ನೂ ಗೊತ್ತಿಲ್ಲ. ವಾಪಸು ಬಂದಿದ್ದರೆ ಒಳ್ಳೆಯದಾಯಿತು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ತಿಳಿಸಿದ್ದಾರೆ.
‘ನಾವು (ವೀರಶೈವ ಬಣ) ಒಪ್ಪಿಕೊಂಡು ಬರುವುದು, ಅವರು (ಲಿಂಗಾಯತ ಬಣ) ಒಪ್ಪಿಕೊಂಡು ಬರುವುದು ಎನ್ನುವುದಕ್ಕಿಂತ ಇಬ್ಬರೂ ಒಂದಾಗಿ ಹೋದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಮೊದಲಿನಿಂದಲೂ ನಾವು ಇದನ್ನೇ ಹೇಳುತ್ತಿದ್ದೇವೆ. ಈ ವಿಚಾರದಲ್ಲಿ ಗೆಲುವು– ಸೋಲಾಗಿದೆ ಎಂದು ಹೇಳುವುದಿಲ್ಲ. ಒಟ್ಟಾಗಿ ಕುಳಿತು ಚರ್ಚೆ ಮಾಡೋಣ’ ಎಂದರು.
‘ಲಿಂಗಾಯತ– ವೀರಶೈವ ಮಹಾಸಭಾ ಎಂದು ಹೆಸರು ಬದಲಿಸಿದರೆ ಲಿಂಗಾಯತರು ಮತ್ತು ವೀರಶೈವರು ಮತ್ತೆ ಒಂದುಗೂಡಲು ಸಾಧ್ಯ’ ಎಂದು ಎಸ್.ಎಂ.ಜಾಮದಾರ ಹೇಳಿದ್ದಾರೆ.
ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಈ ಕುರಿತು ವಿವರಿಸಿ, ‘ಕೇಂದ್ರದಿಂದ ಕಡತ ವಾಪಸು ಬಂದಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಬಂದಿದ್ದರೆ ಅದು ಕೇಂದ್ರ ಮಾಡಿರುವ ರಾಜಕೀಯ ಎಂದು ಪರಿಗಣಿಸಬೇಕಾಗುತ್ತದೆ. ಈ ಸಂಬಂಧ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಸಮಿತಿ ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.