ಕಲಬುರ್ಗಿ: ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಷಯವಾಗಿ ರಂಭಾಪುರಿ ಶ್ರೀ ಅವರಲ್ಲಿ ತಪ್ಪುಗ್ರಹಿಕೆ ಇರಬಹುದು. ನಾವು ಅವರ ಮನವೊಲಿಸುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
‘ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿಯ ವರದಿಯ ಬಗ್ಗೆ ಮುಖ್ಯಮಂತ್ರಿ ಅವರು ಕಾನೂನು ಸಲಹೆ ಕೇಳಿದ್ದಾರೆ. ಬುಧವಾರದ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು, ಬಹುಮತದ ಆಧಾರದ ಮೇಲೆ ಸೂಕ್ತ ತೀರ್ಮಾನವಾಗಲಿದೆ’ ಎಂದು ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅಲ್ಲಿ ಏನು ನಿರ್ಧಾರ ಹೊರಬರಲಿದೆ ಎಂಬುದನ್ನು ನಾನು ಈಗಲೇ ಹೇಗೆ ಹೇಳಲಿ?’ ಎಂದೂ ಅವರು ಪ್ರತಿಕ್ರಿಯಿಸಿದರು.
‘ಶೈವ ಎಂಬ ಪದ ಹಿಂದೂ ಧರ್ಮದ ಭಾಗ ಎಂಬ ಕಾರಣಕ್ಕೇ ಹಿಂದೆ ಈ ಪ್ರಸ್ತಾವ ತಿರಸ್ಕೃತವಾಗಿದೆ. ‘ವೀರಶೈವ–ಲಿಂಗಾಯತ’ಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಕೇಂದ್ರ ಸಮ್ಮತಿಸಿದರೆ ಆ ಪದ ಬಳಕೆಗೆ ನನ್ನ ವಿರೋಧ ಇಲ್ಲ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.