ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ವೇಳೆ ತುಳು ಸಿನಿಮಾ ನಟ ಸುರೇಂದ್ರ ಭಂಡಾರಿ ಸೋಮವಾರ ತಲವಾರು ಹಿಡಿದು ತಿರುಗಾಡುತ್ತಾ ಎದುರಾಳಿಗಳನ್ನು ಬೆದರಿಸಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಜರಂಗದಳದ ಕಾರ್ಯಕರ್ತ ಭುವಿತ್ ಶೆಟ್ಟಿ ನೇತೃತ್ವದ ಗುಂಪು ಬಡ್ಡಕಟ್ಡೆಯ ಕ್ಷೌರದಂಗಡಿಗೆ ಭಾನುವಾರ ನುಗ್ಗಿ ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಸುರೇಂದ್ರ ಭಂಡಾರಿ ನೇತೃತ್ವದ ಗುಂಪು ಭುವಿತ್ ಶೆಟ್ಟಿ ಗುಂಪಿನವರ ಮೇಲೆ ಸೋಮವಾರ ಹಲ್ಲೆಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಸುರೇಂದ್ರ ತಲವಾರು ಹಿಡಿದು ತಿರುಗಾಡುತ್ತಾ ಬೆದರಿಕೆ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಈ ಕುರಿತು 'ಪ್ರಜಾವಾಣಿ' ಜೊತೆ ಮಾತನಾಡಿದ ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್.ರವಿಕಾಂತೇಗೌಡ, ' ಭಾನುವಾರ ಭುವಿತ್ ಶೆಟ್ಟಿ ತಂಡ ಸುರೇಂದ್ರ ಭಂಡಾರಿ ಸಂಬಂಧಿಯ ಮೇಲೆ ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಸುರೇಂದ್ರ ಭಂಡಾರಿ ಕೆಲವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು ಮಾಡಿದ್ದೇವೆ. ಎರಡೂ ಗುಂಪುಗಳ ಸದಸ್ಯರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.