ವಿಜಯಪುರ: ‘ಎರಡು ತಿಂಗಳ ಬಳಿಕ ಬಕ್ರೀದ್ ಬರಲಿದೆ. ಆಗ ಗೋವು ಬಲಿ ಕೊಡಲಾಗುವುದು. ನಗರದಲ್ಲಿ ಗೋ ಹತ್ಯೆ ನೆಪದಲ್ಲಿ ಗದ್ದಲ ಎಬ್ಬಿಸಿ ಮತ್ತೊಂದು ಬಲಿಯಾದೀತು ಎಚ್ಚರದಿಂದಿರಿ..!’
–ಇದು ನಗರದ ದಖ್ಖನಿ ಈದ್ಗಾ ಮೈದಾನದಲ್ಲಿ ಶನಿವಾರ ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಜಮಾಯಿಸಿದ್ದ ಮುಸ್ಲಿಮರಿಗೆ ಹಾಸಿಂಪೀರ ದರ್ಗಾದ ಧರ್ಮಗುರು ಸೈಯ್ಯದ್ ತನ್ವೀರ್ ಪೀರಾ ಹಾಶ್ಮಿ ಹೇಳಿದ ಎಚ್ಚರಿಕೆಯ ಕಿವಿ ಮಾತು.
‘ನಾನು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ನೀವುಗಳು ಸಹ ಸೂಕ್ಷ್ಮವಾಗಿ ಕೇಳಿಸಿಕೊಳ್ಳಿ. ವಿಜಯಪುರದ ಸೈತಾನ ಕಿರಿಕಿರಿ ಕೊಡಬಲ್ಲ. ಸೂಕ್ಷ್ಮವಾಗಿರಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಪರೋಕ್ಷವಾಗಿ ಹೇಳಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಬುರ್ಖಾದವರು, ಗಡ್ಡ ಬಿಟ್ಟವರು, ಟೊಪ್ಪಿಗೆ ಹಾಕಿಕೊಂಡವರು ಕಚೇರಿ ಬಳಿ ಸುಳಿಯಬೇಡಿ ಎಂದು ಹೇಳಿಕೆ ನೀಡಿದ್ದು ಎಷ್ಟು ಸರಿ ? ನಮ್ಮವರು ಅಷ್ಟು ಕೆಳಗಿನ ಹಂತಕ್ಕೆ ಇನ್ನೂ ಇಳಿದಿಲ್ಲ. ಬಹುಶಃ ಯಾರೂ ಅಲ್ಲಿಗೆ ಹೋಗುವುದೂ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ನಮ್ಮಲ್ಲಿಯೇ ಇರುವ ಕೆಲ ಗದ್ದಾರ್ಗಳಿಂದ ಆ ವ್ಯಕ್ತಿ ಗೆದ್ದಿದ್ದಾರೆ. ಸೈತಾನ (ಶಾಸಕ ಯತ್ನಾಳ್) ಬಾಯಿ ತೆಗೆಯಲು ಇವರೇ ಕಾರಣರಾಗಿದ್ದಾರೆ. ಹಿಂದೆ ಟಿಪ್ಪು ಸುಲ್ತಾನರಿಗೂ ಅವರ ಆಪ್ತ ವಲಯದಲ್ಲಿದ್ದವರೇ ಮೋಸ ಮಾಡಿದ್ದರಿಂದ ಯುದ್ಧದಲ್ಲಿ ಸೋತರು. ವಿಜಯಪುರದಲ್ಲಿ ಆ ಇತಿಹಾಸ ಮತ್ತೆ ಮರುಕಳಿಸಿದೆ. ಇದುವರೆಗೂ ಬಿಲದಲ್ಲಿ ಅಡಗಿದ್ದವರು ಇದೀಗ ಮತ್ತೆ ಹೊರಗೆ ಬಂದಿದ್ದಾರೆ. ನೀವು ಅವರಿಂದ ಎಚ್ಚರದಿಂದಿರಿ’ ಎಂದು ಹೇಳಿದರು.
ಸೈತಾನ ಗೆಲ್ಲಲು ಮಾಜಿ ಶಾಸಕ ಡಾ.ಮಕ್ಬೂಲ್ ಎಸ್.ಬಾಗವಾನ ಕಾರಣ ಎಂದು ಅವರು ಪರೋಕ್ಷವಾಗಿ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.