ಬೆಂಗಳೂರು: ಸಿದ್ದರಾಮಯ್ಯನವರ ಬಜೆಟ್ ‘ಸುಳ್ಳುಗಳ ಸರಮಾಲೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ₨ 18,500 ಕೋಟಿ ಸಬ್ಸಿಡಿ ನೀಡಲಾಗಿದೆ. ಈ ರೀತಿ ಮಾಡಿದರೆ ಆರ್ಥಿಕ ಶಿಸ್ತು ತರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಅನುತ್ಪಾದಕ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ನೀರಾವರಿ, ಕೃಷಿ, ವಿದ್ಯುತ್ ವಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
‘ಅನ್ನಭಾಗ್ಯ’ ಒಳ್ಳೆಯ ಯೋಜನೆ. ಆದರೆ, ಕುಟುಂಬವೊಂದಕ್ಕೆ 30 ಕೆ.ಜಿ. ಅಕ್ಕಿ ಕೊಡುವಂತೆ ಯಾರೂ ಕೇಳಿರಲಿಲ್ಲ. ಬೇಕು– ಬೇಡ ಎನ್ನುವುದನ್ನು ಗಮನಿಸದೆ ಅಕ್ಕಿ ಕೊಟ್ಟ ಪರಿಣಾಮ ಸರ್ಕಾರದ ಮೇಲೆ ಹೊರೆ ಹೆಚ್ಚಾಗಿದೆ. ಇದನ್ನು ವಾಸ್ತವಾಂಶದ ಮೇಲೆ ಪರಿಶೀಲಿಸಿ ಅಕ್ಕಿ ಪ್ರಮಾಣ ಕಡಿಮೆ ಮಾಡಿ, ನೀರಾವರಿ, ಕೃಷಿಗೆ ಹೆಚ್ಚಿನ ಹಣ ಮೀಸಲಿಡಬೇಕು. ಇದಕ್ಕೆ ತಾವು ಬೆಂಬಲ ನೀಡುವುದಾಗಿ ಹೇಳಿದರು.
ಮಾಧ್ಯಮಗಳಲ್ಲಿ ಬಣ್ಣ ಬಣ್ಣದ ಜಾಹೀರಾತುಗಳನ್ನು ನೀಡುವುದರಿಂದ ರಾಜ್ಯಕ್ಕೆ ಬಂಡವಾಳ ಬರುವುದಿಲ್ಲ. ಕೈಗಾರಿಕೆಗಳಿಗೆ ಅಗತ್ಯವಿರುವ ವಿದ್ಯುತ್, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಿ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.