ಹುಬ್ಬಳ್ಳಿ: ಪೂರ್ವ ಕರಾವಳಿಯಲ್ಲಿ ಕಾಣಿಸಿಕೊಂಡ ‘ಮ್ಯಾಡಿ’ (ಎಂಎಡಿಐ) ಚಂಡಮಾರುತದ ಪ್ರಭಾವದಿಂದಾಗಿ ರಾಜ್ಯದ ಬಯಲುಸೀಮೆಯಲ್ಲಿ ಚಳಿ ತೀವ್ರವಾಗಿದೆ. ಧಾರವಾಡದಲ್ಲಿ ಶನಿವಾರ ಬೆಳಗಿನ ಜಾವ 10.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ರಾಜ್ಯದಲ್ಲಿಯೇ ಅತ್ಯಂತ ಕನಿಷ್ಠ ಉಷ್ಣಾಂಶವಾಗಿದೆ.
ಚಂಡಮಾರುತ ಉತ್ತರ ದಿಕ್ಕಿನತ್ತ ಸಾಗುತ್ತಿರುವುದರಿಂದ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ಎರಡು ರಾತ್ರಿ ಶೀತ ಗಾಳಿ ಬೀಸುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. ‘ಚಂಡಮಾರುತದ ಪ್ರಭಾವ ಪೂರ್ವ ಕರಾವಳಿಯಲ್ಲಿ ಅಷ್ಟಾಗಿ ಪ್ರಭಾವ ಇರುವುದಿಲ್ಲ. ತಮಿಳುನಾಡು ಮತ್ತು ಆಂಧ್ರ ಕರಾವಳಿಯಲ್ಲಿ ತುಂತುರು ಮಳೆಯಾ ಗಲಿದ್ದು, ಮೋಡ ಮುಸುಕಿದ ವಾತಾವರಣ ಇರಲಿದೆ’ ಎಂದರು.
ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶಕ್ಕಿಂತ ಈ ಸಲ 5ರಿಂದ 6 ಡಿಗ್ರಿ ಸೆಲ್ಷಿಯಸ್ನಷ್ಟು ಕಡಿಮೆಯಾಗಿದೆ. ರಾಯಚೂರಿನಲ್ಲಿ 11.4, ವಿಜಾಪುರ 11.5, ಬೆಳಗಾವಿ ವಿಮಾನ ನಿಲ್ದಾಣ 11.6, ಬಾಗಲಕೋಟೆ 11.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಸಾಮಾನ್ಯವಾಗಿ ಈ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಕನಿಷ್ಠ ಉಷ್ಣಾಂಶ 17 ರಿಂದ 19 ಡಿಗ್ರಿ ಸೆಲ್ಷಿಯಸ್ ಇರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.