ADVERTISEMENT

ಬಸ್ ಟಿಕೆಟ್ ದರದಲ್ಲಿ ಏರಿಕೆ: ವೇತನ ಹೆಚ್ಚಳ ಹೊರೆ ಪ್ರಯಾಣಿಕರಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST
ಬಸ್ ಟಿಕೆಟ್ ದರದಲ್ಲಿ ಏರಿಕೆ: ವೇತನ ಹೆಚ್ಚಳ ಹೊರೆ ಪ್ರಯಾಣಿಕರಿಗೆ
ಬಸ್ ಟಿಕೆಟ್ ದರದಲ್ಲಿ ಏರಿಕೆ: ವೇತನ ಹೆಚ್ಚಳ ಹೊರೆ ಪ್ರಯಾಣಿಕರಿಗೆ   

ಬೆಂಗಳೂರು: ಡೀಸೆಲ್ ಬೆಲೆ ಹೆಚ್ಚಳ ಮತ್ತು ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬಳಕೆಯ ಮೇಲೆ ಮಿತಿ ಹೇರುವ ಕೇಂದ್ರ ಸರ್ಕಾರದ ಕ್ರಮದಿಂದ ಕೋಪಗೊಂಡಿರುವ ಜನಸಾಮಾನ್ಯರಿಗೆ ಮತ್ತೊಂದು ಕಹಿ ಸುದ್ದಿ. ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಟಿಕೆಟ್ ದರದಲ್ಲಿ ಶೇಕಡ 12ರಷ್ಟು ಹೆಚ್ಚಳ ಮಾಡಿದೆ.

ಡೀಸೆಲ್ ದರದಲ್ಲಿ ಆದ ಹೆಚ್ಚಳ ಮತ್ತು ರಾಜ್ಯದ ವಿವಿಧ ಸಾರಿಗೆ ನಿಗಮಗಳ ನೌಕರರ ತುಟ್ಟಿಭತ್ಯೆಯಲ್ಲಿ ಆದ ಹೆಚ್ಚಳವೇ ಬಸ್ ಪ್ರಮಾಣ ದರ ಏರಿಕೆಗೆ ಪ್ರಮುಖ ಕಾರಣ ಎಂದು ನಿಗಮ ಹೇಳಿದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಪಾಸ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ ರೂ 6.13  ಹೆಚ್ಚಿಸಿರುವ ಕಾರಣ, ನಿಗಮಕ್ಕೆ ವಾರ್ಷಿಕ ರೂ 121.13 ಕೋಟಿ  ಹೊರೆ ಬಿದ್ದಿದೆ. ನೌಕರರ ತುಟ್ಟಿಭತ್ಯೆ ಹೆಚ್ಚಳ ಆಗಿರುವ ಕಾರಣ, ಪ್ರತಿ ವರ್ಷ ರೂ 184.74 ಕೋಟಿ  ಹೆಚ್ಚುವರಿ ಹೊರೆ ಬಿದ್ದಿದೆ. ಒಟ್ಟಾರೆ ರೂ 305 ಕೋಟಿ  ಅಧಿಕ ವೆಚ್ಚ ನಿಗಮದ ಮೇಲೆ ಬಿದ್ದಿದೆ ಎಂದು ಪ್ರಕಟಣೆ ತಿಳಿಸಿದೆ.

ರಿಯಾಯಿತಿ ದರದಲ್ಲಿ ನೀಡುವ ವಿದ್ಯಾರ್ಥಿ ಪಾಸ್‌ಗಳ ಬೆಲೆಯನ್ನು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಇಳಿಸಲಾಗಿದೆ. ಪ್ರಯಾಣದ ಮಿತಿಯನ್ನು 50 ಕಿ.ಮೀ.ನಿಂದ 60 ಕಿ.ಮೀಗೆ ಹೆಚ್ಚಳ ಮಾಡಿರುವುದರಿಂದ, ನಿಗಮ ವಾರ್ಷಿಕ ರೂ 60 ಕೋಟಿ  ಹೆಚ್ಚುವರಿಖರ್ಚು ಮಾಡಬೇಕಾಗಿದೆ. ಈ ಎಲ್ಲ ಹೆಚ್ಚುವರಿ ವೆಚ್ಚಗಳನ್ನು ಸರಿದೂಗಿಸುವ ದೃಷ್ಟಿಯಿಂದ ದರ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಇದು ನಿಗಮಕ್ಕೆವಾರ್ಷಿಕ ರೂ 237 ಕೋಟಿ ರೂಪಾಯಿ ವರಮಾನ ತರಲಿದೆ ಎಂದು ಅಂದಾಜಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.