ಹುಬ್ಬಳ್ಳಿ: ಬಾಗಲಕೋಟೆ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾನುವಾರ ಉತ್ತಮ ಮಳೆಯಾಗಿದೆ.
ಬಾದಾಮಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಲೋಕಾಪುರದಲ್ಲಿ ಎರಡು ತಾಸು ಹಾಗೂ ಕೆರೂರಿನಲ್ಲಿ ಒಂದು ಗಂಟೆ ಬಿರುಸಿನ ಮಳೆಯಾಗಿದೆ. ವಿಜಯಪುರ, ತಾಂಬಾ, ಬಸವನಬಾಗೇವಾಡಿ, ಇಂಡಿ ಮತ್ತು ದೇವರ ಹಿಪ್ಪರಗಿಯಲ್ಲಿ ಬಿರುಸಿನ ಮಳೆಯಾಗಿದೆ.
ಒಳಹರಿವು ಇಳಿಮುಖ: ಆಲಮಟ್ಟಿ ಮತ್ತು ತುಂಗಭದ್ರಾ ಜಲಾಶಯಗಳ ಒಳಹರಿವಿನ ಪ್ರಮಾಣ ಭಾನುವಾರ ಕಡಿಮೆಯಾಗಿದೆ.
ಆಲಮಟ್ಟಿಯ ಲಾಲ್ಬಹಾದ್ದೂರ್ ಶಾಸ್ತ್ರಿ ಸಾಗರ ಜಲಾಶಯದ ಒಳಹರಿವು ಶನಿವಾರ 24,920 (2.2 ಟಿ.ಎಂ.ಸಿ ಅಡಿ) ಕ್ಯುಸೆಕ್ ಇದ್ದರೆ, ಭಾನುವಾರ 23,960 (2.1 ಟಿ.ಎಂ.ಸಿ ಅಡಿ) ಕ್ಯುಸೆಕ್ಗೆ ಇಳಿದಿದೆ. ಶನಿವಾರ 511.340 ಮೀ ನಷ್ಟಿದ್ದ ಜಲಾಶಯದ ಮಟ್ಟ, ಭಾನುವಾರ 511.780 ಮೀ ಗೆ ತಲುಪಿದೆ. ನೀರಿನ ಸಂಗ್ರಹ 37.493 ಟಿಎಂಸಿ ಅಡಿಯಿಂದ 39.563 ಟಿಎಂಸಿ ಅಡಿಗೇರಿದೆ. 24 ತಾಸಿನಲ್ಲಿ ಜಲಾಶಯಕ್ಕೆ 2.070 ಟಿಎಂಸಿ ಅಡಿ ನೀರು ಹರಿದು ಬಂದಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ತುಂಗಭದ್ರಾ ಜಲಾಶಯದ ಒಳಹರಿವು ಶನಿವಾರ 11,979 ಕ್ಯುಸೆಕ್ ಇದ್ದರೆ, ಭಾನುವಾರ 9,757 ಕ್ಯುಸೆಕ್ ದಾಖಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಭಾನುವಾರ 11.376 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದ್ದು, 9,757 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಶನಿವಾರ 10.567 ಟಿ.ಎಂ.ಸಿ. ಅಡಿ ನೀರಿತ್ತು. 11,979 ಕ್ಯುಸೆಕ್ ಒಳಹರಿವು ಇತ್ತು.
ಸಿಡಿಲಿಗೆ ಯುವಕ ಬಲಿ
ಕಲಬುರ್ಗಿ: ಚಿತ್ತಾಪುರ ತಾಲ್ಲೂಕು ನಾಲವಾರ ಗ್ರಾಮದ ಸೋಮ್ಲಾ ನಾಯಕ ತಾಂಡಾದಲ್ಲಿ ಭಾನುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ನಾರಾಯಣ ಹೇಮ್ಲಾ (21) ಮೃತಪಟ್ಟಿದ್ದಾರೆ. ಅವರ ಸಂಬಂಧಿಕರಾದ ದೇವಲಾ ಪವಾರ ಹಾಗೂ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.