ಪಾಂಡವಪುರ: ಬಾಲಕಿಯನ್ನು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಹೂತುಹಾಕಿದ್ದ ಘಟನೆ ತಾಲ್ಲೂಕಿನ ನುಗ್ಗಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಗ್ರಾಮದ ಮಧು ಅಲಿಯಾಸ್ ಕೆಂಗ (19) ಬಂಧಿತ ಆರೋಪಿ.
ನುಗ್ಗಹಳ್ಳಿಯ ಸರ್ಕಾರಿ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಮಲ ವಿಸರ್ಜನೆಗೆ ಮನೆಯಿಂದ ಹೊರಹೋದವಳು ಸಂಜೆ ಏಳು ಗಂಟೆಯಾದರೂ ಮರಳಿ ಬರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಬಾಲಕಿಗಾಗಿ
ಊರಲ್ಲೆಲ್ಲ ಹುಡುಕಾಡಿದರೂ ಪತ್ತೆಯಾಗಲಿಲ್ಲ.
ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಇರುವ ಕಾರಣಕ್ಕೆ, ಬಾಲಕಿಗಾಗಿ ರಾತ್ರಿ ಹುಡುಕಾಟ ನಡೆಸಲು ಗ್ರಾಮಸ್ಥರು ಹಿಂದೇಟು ಹಾಕಿದರು. ಹೀಗಾಗಿ, ಬೆಳಿಗ್ಗೆ ಪೋಷಕರು ಜಮೀನಿನ ಕಡೆ ಹುಡುಕಾಟ ನಡೆಸುತ್ತಿದಾಗ ಪುಟ್ಟಸಿದ್ದಮ್ಮ ಎಂಬುವವರ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿದೆ. ಕಾಲಿನ ಸ್ವಲ್ಪ ಭಾಗ ಬಿಟ್ಟು ದೇಹವನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಮಗುವಿನ ಕೈ–ಕಾಲುಗಳನ್ನು ಕಬ್ಬಿನ ಗರಿಯಿಂದ ಕಟ್ಟಿದ್ದು, ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಅತ್ಯಾಚಾರದ ಶಂಕೆ: ಆರೋಪಿ ಮಧು ಬಾಲಕಿಯನ್ನು ಕೊಲೆ ಮಾಡುವ ಮುನ್ನ ಅತ್ಯಾಚಾರವೆಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶವ ಪರೀಕ್ಷೆಯಿಂದ ಸತ್ಯ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.