ADVERTISEMENT

ಬಿಎಸ್‌ವೈಗೆ ಬಿಜೆಪಿ ಮೇಲೆ ‘ವಿಶ್ವಾಸ ಇಲ್ಲ’

ನಾಳೆಯಿಂದ ಬೇರೆ ರೀತಿಯಲ್ಲಿ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ದಾವಣಗೆರೆ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 10 ಸ್ಥಾನ ಗೆಲ್ಲಬೇಕು. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಎನ್‌ಡಿಎ ಬೆಂಬಲಿಸಬೇಕು’ ಎಂಬ ಸಂಕಲ್ಪದೊಂದಿಗೆ ಕರ್ನಾಟಕ ಜನತಾ ಪಕ್ಷ ಮಧ್ಯ ಕರ್ನಾಟಕದ ದಾವಣಗೆರೆಯಿಂದ ಚುನಾವಣಾ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿತು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕ ರಪ್ಪ ಸಮುದಾಯ ಭವನದದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಾಜಿ ಶಾಸಕ ಕೆ.ಮಾಡಾಳ್‌ ವಿರೂಪಾಕ್ಷಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಕಿಕ್ಕಿರಿದು ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಲ್ಲ ಮುಖಂಡರು, ಮುಂಬರುವ ಲೋಕಸಭಾ ಚುನಾ ವಣೆಗೆ ಸಜ್ಜಾಗುವಂತೆ ಕರೆ ನೀಡಿದರು.

‘ಕೆಜೆಪಿಯನ್ನು ಯಾವುದೇ ಪಕ್ಷದೊಂದಿಗೆ ವಿಲೀನ ಗೊಳಿಸುವುದಿಲ್ಲ’ ಎಂದು ಪುನರುಚ್ಚರಿಸಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ‘ನಾನೊಬ್ಬ ದೇಶಭಕ್ತ. ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬ ಏಕೈಕ ಉದ್ದೇಶದಿಂದ ಯಾರು ಕೇಳದಿದ್ದರೂ ಎನ್‌ಡಿಎಗೆ ಬೆಂಬಲ ಘೋಷಿಸಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ನಂಬುವುದಿಲ್ಲ. ಅನಿವಾರ್ಯವಾದರೆ ಮಾತ್ರ ಹೊಂದಾಣಿಕೆ ರಾಜ ಕಾರಣ ಮಾಡುತ್ತೇನೆ’ ಎಂದು ಸ್ಪಷ್ಟಪ ಡಿಸಿದರು.

‘ಅಧಿಕಾರವನ್ನೇ ಕಾಣದ ಪಕ್ಷಕ್ಕೆ (ಬಿಜೆಪಿ) ಅಧಿಕಾರ ತಂದುಕೊಟ್ಟವನು ನಾನು. ಬಿಜೆಪಿ ನಾಯಕರಿಗೆ ಗೂಟದ ಕಾರು ಕೊಟ್ಟವರಾರು? ತಾಕತ್ತಿದ್ದರೆ ಆಪರೇಷನ್‌ ಕಮಲವನ್ನು ಈಗ ಮಾಡಲಿ’ ಎಂದು ಬಿಜೆಪಿ ನಾಯಕರಿಗೆ ಸವಾಲೆಸೆದರು.

‘ನನಗೆ ಇನ್ನೂ ಕೈ–ಕಾಲು ಗಟ್ಟಿ ಇದೆ. ಕೆಜೆಪಿ ಬಲಪಡಿಸುವುದಕ್ಕಾಗಿ ರಾಜ್ಯಾದ್ಯಂತ ಸುತ್ತುತ್ತೇನೆ. ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ ಎಂದುಕೊಂಡು ವಾರಕ್ಕೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.