ADVERTISEMENT

ಬಿಕ್ಕಳಿಸಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಬೆಂಗಳೂರು: `ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಿ. ಆಗ ಸ್ವಲ್ಪ ಗೆಲುವಾಗುತ್ತೀರಿ. ಬಜೆಟ್ ಸಿದ್ಧಪಡಿಸುವಾಗ ನನಗೆ ನಿಮ್ಮ ಸಹಾಯ ಬೇಕು ಎಂದು ನಾನು ಡಾ.ವಿ.ಎಸ್. ಆಚಾರ್ಯ ಅವರನ್ನು ಕೋರಿದ್ದೆ. ಹತ್ತು ದಿನಗಳಲ್ಲಿ ಬಜೆಟ್ ಸಿದ್ಧಪಡಿಸೋಣ ಎಂದು ಅವರು ನನಗೆ ಮಾತು ಕೊಟ್ಟಿದ್ದರು. ಆದರೆ ಈಗ ಅವರೇ ಇಲ್ಲ. ಅವರು ಇನ್ನು ನನಗೆ ಹೇಗೆ ಸಮಯ ಕೊಡುತ್ತಾರೆ? ನನಗೆ ದಿಕ್ಕು ಕಾಣುತ್ತಿಲ್ಲ...~

ಇಲ್ಲಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಆಚಾರ್ಯರ ಪಾರ್ಥಿವ ಶರೀರದ ದರ್ಶನ ಪಡೆದ ನಂತರ ದುಃಖದ ಮಡುವಿನಲ್ಲಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದ ಮಾತು ಇದು. ಆಚಾರ್ಯರನ್ನು ಗುರುವಿನ ಸ್ಥಾನದಲ್ಲಿಟ್ಟಿದ್ದ ಮುಖ್ಯಮಂತ್ರಿಗಳು ಅವರ ಪಾರ್ಥಿವ ಶರೀರ ನೋಡಿದ ನಂತರ ಶೋಕತಪ್ತರಾಗಿದ್ದರು. ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯು ಅವರಿಂದ ಆಗುತ್ತಿರಲಿಲ್ಲ.

 `1968-69ರಲ್ಲಿ ರಾಜಕೀಯ ಪ್ರವೇಶಿಸಿದ ನನ್ನನ್ನು ಆಚಾರ್ಯ ಗುರುವಿನ ಸ್ಥಾನದಲ್ಲಿ ನಿಂತು ಮುನ್ನಡೆಸಿದರು. ಬಿಜೆಪಿ ಪಾಲಿಗೆ ಅವರು ದೇವರಿದ್ದಂತೆ. ನಾನು ಇಂದು ಈ ಮಟ್ಟಕ್ಕೇರಲು ಅವರೇ ಕಾರಣ. ಅವರ ಸಾವು ನನಗೆ ಅತ್ಯಂತ ದೊಡ್ಡ ನಷ್ಟ ಉಂಟು ಮಾಡಿದೆ~ ಎಂದು ಅವರು ಬಿಕ್ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.