ADVERTISEMENT

ಬಿಜೆಪಿಯತ್ತ ಬಿಎಸ್‌ಆರ್‌ ಕಾಂಗ್ರೆಸ್‌ ಒಲವು

ಮೋದಿಗೆ ಬೆಂಬಲ: ಸೋಮಶೇಖರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:55 IST
Last Updated 15 ಡಿಸೆಂಬರ್ 2013, 19:55 IST

ಬಳ್ಳಾರಿ: ‘ಬಿಜೆಪಿ ನಮ್ಮ ಮಾತೃ ಪಕ್ಷವಾಗಿದ್ದು, ಸಹಜವಾಗಿಯೇ ಆ ಪಕ್ಷದತ್ತ ಒಲವು ಇದೆ’ ಎಂದು ಬಿಎಸ್ಆರ್ ಕಾಂಗ್ರೆಸ್ ಮುಖಂಡ   ಜಿ.ಸೋಮಶೇಖರ ರೆಡ್ಡಿ ತಿಳಿಸಿದರು.

ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಭಾನುವಾರ ಬೆಳಿಗ್ಗೆ ಲೋಹ ಸಂಗ್ರಹಣಾ ಸಮಿತಿಯು ಸರ್ದಾರ್‌ ವಲ್ಲಭಭಾಯಿ ಪಟೇಲ್ ಪ್ರತಿಮೆ  ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಏಕತಾ ಓಟದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಮೂಲಕ, ಬಿಎಸ್‌ಆರ್‌ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗುವ ಸೂಚನೆ ನೀಡಿದರು. ಅಲ್ಲದೇ, ನರೇಂದ್ರ ಮೋದಿ ದೇಶದ ಪ್ರಧಾನಿ ಆಗುವುದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

‘ರಾಷ್ಟ್ರದ ಏಕತೆಯ ದೃಷ್ಟಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ­ದ್ದೇನೆ.   ನರೇಂದ್ರ ಮೋದಿ ಪ್ರಧಾನಿ­ಯಾಗಬೇಕು ಎಂಬ ಆಶಯ ನಮ್ಮದು. ಈ ಗುರಿ ಮುಟ್ಟಲು ಬಳ್ಳಾರಿ ಸೇರಿ­ದಂತೆ ರಾಜ್ಯದಾದ್ಯಂತ ಶ್ರಮಿಸುತ್ತೇವೆ’ ಎಂದು ಅವರು ಹೇಳಿದರು.

‘ಬಿಜೆಪಿಯತ್ತ ಸದಾ ಒಲವು ಇದೆ. ಆ ಪಕ್ಷದೊಂದಿಗೆ ವಿಲೀನವಾಗುವ ಕುರಿತು ಬಿಎಸ್‌ಆರ್‌ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಬಿ.ಶ್ರೀರಾಮುಲು ಮಾತುಕತೆ ನಡೆಸಿದ್ದಾರೆ. ಅವರ ನಿರ್ಧಾರವೇ ಅಂತಿಮ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.