ಬೆಂಗಳೂರು: ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆಗೊಂಡಿರುವ ಡಿಜಿಪಿ ಶಂಕರ ಬಿದರಿ ಅವರು 15 ದಿನಗಳ ರಜೆಯ ಮೇಲೆ ತೆರಳಿದ್ದಾರೆ.
`ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ ಮತ್ತು ಐಜಿಪಿ) ಹುದ್ದೆಯಲ್ಲಿದ್ದ ಸಂದರ್ಭದಲ್ಲೇ ವೈಯಕ್ತಿಕ ಕಾರಣಕ್ಕಾಗಿ 15 ದಿನಗಳ ರಜೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಸರ್ಕಾರ ರಜೆ ಮಂಜೂರು ಮಾಡಿದೆ~ ಎಂದು ಬಿದರಿ `ಪ್ರಜಾವಾಣಿ~ಗೆ ತಿಳಿಸಿದರು.
`ನಾನು ರಜೆಯಲ್ಲಿ ಇರುವುದರಿಂದ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಅಧಿಕಾರವನ್ನು ವಹಿಸಿಕೊಂಡಿಲ್ಲ~ ಎಂದು ಅವರು ಹೇಳಿದರು.ಸ್ವಯಂ ನಿವೃತ್ತಿ: ಸರ್ಕಾರ ನೆರವಿಗೆ ಬರಲಿಲ್ಲ ಎಂದು ಆರೋಪಿಸಿ ಬಿದರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಅಲ್ಲದೇಸ್ವಯಂ ನಿವೃತ್ತಿ ಪಡೆದುಕೊಳ್ಳುವುದಾಗಿಯೂ ಆ ಪತ್ರದಲ್ಲಿ ತಿಳಿಸಿದ್ದಾರೆ. 41 ವರ್ಷಗಳ ಸೇವಾವಧಿಯಲ್ಲಿ ಒಂದು ದಿನವೂ ರಜೆ ಪಡೆಯದೆ ಮತ್ತು ವೈಯಕ್ತಿಕ ಜೀವನವನ್ನು ಬಲಿ ಕೊಟ್ಟು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರೂ ಸರ್ಕಾರ ತಮ್ಮ ಸೇವೆ ಗುರುತಿಸಲಿಲ್ಲ ಎಂದು ಅಸಮಾಧಾನಗೊಂಡು ಬಿದರಿ ಸ್ವಯಂ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲ ಸುದ್ದಿವಾಹಿನಿಗಳಲ್ಲಿ ಭಾನುವಾರ ಬೆಳಿಗ್ಗೆ ಸುದ್ದಿ ಪ್ರಸಾರವಾಯಿತು.
ಈ ಸುದ್ದಿ ನೋಡಿ ಆಶ್ಚರ್ಯಗೊಂಡ ಬಿದರಿ ಸುದ್ದಿವಾಹಿನಿಗಳಿಗೆ ಕರೆ ಮಾಡಿದಾಗ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಭಾನುವಾರ ಮೂರ್ಖರ ದಿನವಾಗಿದ್ದರಿಂದ (ಏ.1) ಈ ರೀತಿ ಸುದ್ದಿ ಪ್ರಸಾರ ಮಾಡಲಾಯಿತು ಎಂದು ಸುದ್ದಿವಾಹಿನಿಗಳು ಅವರಿಗೆ ತಿಳಿಸಿದವು. ಈ ಸುದ್ದಿ ನೋಡಿದ ಪೊಲೀಸ್ ಇಲಾಖೆ ಹಲವು ಅಧಿಕಾರಿಗಳು, ಬಿದರಿ ಹಿತೈಷಿಗಳು ಹಾಗೂ ಸ್ನೇಹಿತರು ಅವರಿಗೆ ಕರೆ ಮಾಡಿ ಸ್ವಯಂ ನಿವೃತ್ತಿ ನಿರ್ಧಾರದ ಬಗ್ಗೆ ಪ್ರಶ್ನಿಸಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಬಿದರಿ, `ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಕೆಲ ಸುದ್ದಿವಾಹಿನಿಗಳಲ್ಲಿ ವರದಿಯಾಗುತ್ತಿದೆ. ಆದರೆ, ನಾನು ಸ್ವಯಂ ನಿವೃತ್ತಿ ಕೋರಿಲ್ಲ. ಯಾವುದೇ ಸರ್ಕಾರ ನನ್ನನ್ನು ಕಡೆಗಣಿಸಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬೇಸರಪಟ್ಟುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.