ಬೀದರ್: ಉತ್ತರ ಭಾರತದ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ತೆರಳಿ ಮಹಾಮಳೆಯಿಂದಾಗಿ ಹರಿದ್ವಾರ ಸಮೀಪ ಸಿಲುಕಿರುವ ಯಾತ್ರಾರ್ಥಿಗಳ ಪೈಕಿ ಬೀದರ್ನ ಇಬ್ಬರು ಸೇರಿದ್ದಾರೆ.
ನಗರದ ಶ್ಯಾಮಸುಂದರ್ ಜಹಗೀರ್ದಾರ್, ಪತ್ನಿ ರಾಧಾ ಸಿಕ್ಕಿಬಿದ್ದಿದ್ದಾರೆ. ಜೂನ್ 2 ರಂದು ಹೈದರಾಬಾದ್ನ ಮೂಲಕ ಸಹಯಾತ್ರಿಗಳ ಜೊತೆಗೆ ಪ್ರವಾಸ ತೆರಳಿದ್ದರು.
`ಎರಡು ದಿನದ ಹಿಂದಷ್ಟೇ ತಂದೆಯವರು ನನ್ನ ಜೊತೆಗೆ ಮಾತನಾಡಿದ್ದು, ಸುರಕ್ಷಿತವಾಗಿರುವ ಮಾಹಿತಿ ನೀಡಿದ್ದಾರೆ. ಹೀಗಾಗಿ ಆತಂಕ ಕಡಿಮೆಯಾಗಿದೆ. ಜೋಶಿಮಠದಿಂದ ಹರಿದ್ವಾರಕ್ಕೆ ಹೋಗುವಾಗ ಮಹಾಮಳೆ ಹೆಚ್ಚಾಗಿದ್ದು, ದಾರಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ಮಾಹಿತಿ ನೀಡಿದರು' ಎಂದು ಅವರ ಪುತ್ರ ಹೃಷಿಕೇಶ್ ಜಹಗೀರ್ದಾರ್ `ಪ್ರಜಾವಾಣಿ'ಗೆ ತಿಳಿಸಿದರು.
`ಹೈದರಾಬಾದ್ನಿಂದ ಪ್ಯಾಕೇಜ್ ಟೂರ್ನಲ್ಲಿ ಗುಲ್ಬರ್ಗದ ಕೆಲವರೊಂದಿಗೆ ಇವರು ಯಾತ್ರೆ ತೆರಳಿದರು. ಇವರ ಜೊತೆಗೆ ಸಂಬಂಧಿಗಳಾದ ಆನಂದ ಭಕ್ತಿ ಮತ್ತು ಗೀತಾ ಭಕ್ತಿ ಅವರು ಇದ್ದಾರೆ. ಎಲ್ಲರೂ ಕ್ಷೇಮವಾಗಿದ್ದು ರಕ್ಷಣಾ ಸಿಬ್ಬಂದಿ ಇವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ತಾಣಕ್ಕೆ ಒಯ್ಯುವುದಾಗಿ ಭರವಸೆ ನೀಡಿದ್ದಾರೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.