ADVERTISEMENT

ಬೆಂಗಳೂರಿನಲ್ಲಿ ಅಪಹರಣ, ಗೌರಿಬಿದನೂರು ಬಳಿ ಫಾರ್ಮ್‌ ಹೌಸ್‌ನಲ್ಲಿ ಕೊಲೆ

ರೌಡಿಗಳ ಮೇಲೆ ಹಲ್ಲೆ, ಒಬ್ಬನ ಬರ್ಬರ ಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 12:43 IST
Last Updated 10 ಅಕ್ಟೋಬರ್ 2017, 12:43 IST
ಬೆಂಗಳೂರಿನಲ್ಲಿ ಅಪಹರಣ, ಗೌರಿಬಿದನೂರು ಬಳಿ ಫಾರ್ಮ್‌ ಹೌಸ್‌ನಲ್ಲಿ ಕೊಲೆ
ಬೆಂಗಳೂರಿನಲ್ಲಿ ಅಪಹರಣ, ಗೌರಿಬಿದನೂರು ಬಳಿ ಫಾರ್ಮ್‌ ಹೌಸ್‌ನಲ್ಲಿ ಕೊಲೆ   

ಚಿಕ್ಕಬಳ್ಳಾಪುರ: ಹಣಕ್ಕಾಗಿ ಬೇಡಿಕೆ ಇಟ್ಟು, ಕಿರುಕುಳ ನೀಡುತ್ತಿದ್ದ ರೌಡಿಗಳನ್ನು ಬೆಂಗಳೂರಿನಿಂದ ಅಪಹರಿಸಿಕೊಂಡು ಬಂದು ಗೌರಿಬಿದನೂರು ತಾಲ್ಲೂಕಿನ ಚಿಗಟಗೆರೆ ಬಳಿ ಇರುವ ಫಾರ್ಮ್ ಹೌಸ್‌ನಲ್ಲಿ ಮಂಗಳವಾರ ಮಾರಣಾಂತಿಕ ಹಲ್ಲೆ ಮಾಡಿ, ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೆಂಗಳೂರಿನ ಆರ್‌.ಟಿ.ನಗರದ ಪೊಲೀಸ್‌ ಠಾಣೆ ವ್ಯಾಪ್ತಿಯ ನೂರ್ ಅಹಮದ್ (22), ಮುದಾಸೀರ್ (23), ಕಾಲು (23) ಅಪಹರಣಕ್ಕೆ ಒಳಗಾದವರು. ಈ ಪೈಕಿ ಹಲ್ಲೆ ವೇಳೆ ನೂರ್ ಅಹಮದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಮುದಾಸೀರ್, ಕಾಲು ಸ್ಥಿತಿ ಚಿಂತಾಜನಕವಾಗಿದ್ದು ಇಬ್ಬರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಏನಿದು ಪ್ರಕರಣ?
‘ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಜುನೈದ್ ಖಾನ್‌ (22) ಎಂಬುವರಿಗೆ ಕಳೆದ ಎರಡು ಮೂರು ವರ್ಷಗಳಿಂದ ಅಪಹೃತ ರೌಡಿಗಳು ಹಣಕ್ಕಾಗಿ ಬೇಡಿಕೆ ಇಟ್ಟು, ಕಿರುಕುಳ ನೀಡುತ್ತಿದ್ದರು. ಇದನ್ನು ತಾಳಲಾರದೆ ಜುನೈದ್ ಖಾನ್‌ ಮೂರು ಜನರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ತನ್ನ ಸಹಚರರೊಂದಿಗೆ ಸೇರಿ ಅಪಹರಣದ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಸೋಮವಾರ ರಾತ್ರಿ ಜುನೈದ್‌ ಖಾನ್‌ ರೌಡಿಗಳನ್ನು ಹಣ ನೀಡುವುದಾಗಿ ಹೇಳಿ ಕರೆಸಿಕೊಂಡು, ಅವರನ್ನು ತನ್ನ ಸಹಚರರೊಂದಿಗೆ ಅಪಹರಿಸಿಕೊಂಡು ಚಿಗಟಗೆರೆ ಹೊರವಲಯದಲ್ಲಿರುವ ಫಾರ್ಮ್‌ ಹೌಸ್‌ಗೆ ಕರೆತಂದು ರೂಮಿನಲ್ಲಿ ಕೂಡಿ ಹಾಕಿದ್ದರು. ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ  21 ಜನರು ಏಕಾಏಕಿ ಮೂರು ಮಂದಿಯ ಮೇಲೆ ಮಾರಣಾಂತಿಕ  ಹಲ್ಲೆ ನಡೆಸಿದ್ದಾರೆ’ ಎಂದು ತಿಳಿಸಿದರು.

‘ನವೀನ್ ಎಂಬುವರಿಗೆ ಸೇರಿದ್ದ ಫಾರ್ಮಹೌಸ್‌ನ್ನು ಆಶ್ರಫ್‌ ಎಂಬುವರು ಗುತ್ತಿಗೆ ಪಡೆದು ಅದರಲ್ಲಿ ಕುರಿ ಮತ್ತು ಹಸುಗಳ ಸಾಕಣೆ ಮಾಡುತ್ತಿದ್ದರು. ಆಗಾಗ ಜುನೈದ್ ಖಾನ್‌ ಇಲ್ಲಿಗೆ ತನ್ನ ಸ್ನೇಹಿತರೊಂದಿಗೆ ಮೋಜಿನ ಕೂಟಕ್ಕಾಗಿ ಬಂದು ಹೋಗುತ್ತಿದ್ದ. ಹೀಗಾಗಿ ಆರೋಪಿ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ಎಸ್‌ಪಿ ಕಾರ್ತಿಕ್‌ ರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಜುನೈದ್‌ ಖಾನ್‌ ಸೇರಿದಂತೆ 21 ಆರೋಪಿಗಳ್ನು ಬಂಧಿಸಿದ್ದರು. ಬಂಧಿತರನ್ನು ಬೆಂಗಳೂರು ಆರ್‌.ಟಿ.ನಗರ ಪೊಲೀಸರು  ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.