ರೋಣ ( ಗದಗ ಜಿಲ್ಲೆ): ತಾಲ್ಲೂಕಿನ ಯಾವಗಲ್ ಗ್ರಾಮದ ಬಳಿ ಹರಿದಿರುವ ಬೆಣ್ಣಿ ಹಳ್ಳದ ಪ್ರವಾಹದಲ್ಲಿ ಮಂಗಳವಾರ ಮಧ್ಯಾಹ್ನ ಎರಡು ಶವಗಳು ತೇಲುತ್ತ ಬಂದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಂದು ಶವವನ್ನು ಹೊರತೆಗೆದಿದ್ದಾರೆ. ಇನ್ನೊಂದಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ.
‘ಹೊರತೆಗೆಯಲಾದ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ. ಐದು ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ. ಧಾರವಾಡ, ನವಲಗುಂದ ಭಾಗದಿಂದ ಹಳ್ಳದ ಪ್ರವಾಹದಲ್ಲಿ ಶವ ತೇಲಿಕೊಂಡು ಬಂದಿರಬಹುದು. ಆದರೆ, ಈ ಭಾಗದಲ್ಲಿ ಕಳೆದೊಂದು ವಾರದಲ್ಲಿ ಯಾವುದೇ ನಾಪತ್ತೆ ಪ್ರಕರಣ ದಾಖಲಾಗಿಲ್ಲ. ತನಿಖೆ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಪ್ರಜಾವಾಣಿಗೆ ತಿಳಿಸಿದರು.
‘ಬೆಣ್ಣಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತುಸು ಅಡ್ಡಿಯಾಗಿದೆ. ಸಾಕಷ್ಟು ಮುಂಜಾಗ್ರತೆ ವಹಿಸಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದೇವೆ’ ಎಂದು ಅವರು ಹೇಳಿದರು.
ಇನ್ನೊಬ್ಬ ವ್ಯಕ್ತಿಯ ಶವ, ಬಾಗಲಕೋಟೆ ಜಿಲ್ಲೆ ಬಾದಾಮಿ ಬಳಿಯ ಮುಮ್ಮರಡ್ಡಿಕೊಪ್ಪ ಬಳಿ ಕೊಚ್ಚಿಹೋಗಿದೆ ಎಂದು ಶಂಕಿಸಲಾಗಿದ್ದು, ಹುಡುಕಾಟ ನಡೆದಿದೆ. ಇಲ್ಲಿಂದ ಮುಂದೆ ಹರಿಯುವ ಬೆಣ್ಣಿಹಳ್ಳವು ಮಲಪ್ರಭಾ ನದಿಯನ್ನು ಸೇರುತ್ತಿದ್ದು ನದಿಯಲ್ಲೂ ಶೋಧ ಕಾರ್ಯ ನಡೆದಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.