ಬೆಂಗಳೂರು: ಸುಭಾಷ್ಚಂದ್ರ ಬೋಸ್ ಅವರ ಪುತ್ರಿ ಪ್ರೊ.ಅನಿತಾ ಬೋಸ್ ಫಫ್ ಮತ್ತು ಪತಿ ಪ್ರೊ.ಮಾರ್ಟಿನ್ ಫಫ್ ಅವರು ನಗರದ ಶೇಷಾದ್ರಿಪುರದಲ್ಲಿನ ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ಬುಧವಾರ ಅಂಧ ಮಕ್ಕಳೊಂದಿಗೆ ಒಂದಷ್ಟು ಸಮಯ ಕಳೆದರು. ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಅಪರೂಪದ ಅತಿಥಿಗಳು ತಮ್ಮ ಸಂಸ್ಥೆಗೆ ಬಂದ ಖುಷಿಯಲ್ಲಿ ಅಂಧ ಮಕ್ಕಳು ಸಂಭ್ರಮಿಸಿದರು.
ಪ್ರೊ.ಅನಿತಾ ಬೋಸ್ ಫಫ್ ಮಾತನಾಡಿ, `ಅಂಧ ಮಕ್ಕಳು ತಮ್ಮ ದೈಹಿಕ ಮಿತಿಗಳನ್ನು ಮೀರಿ ಸಾಧನೆ ಮಾಡಬೇಕು. ಹಿರಿಯ ಸಾಧಕರ ಜೀವನಾದರ್ಶಗಳನ್ನು ಶಿಕ್ಷಕರು ಈ ಮಕ್ಕಳಿಗೆ ಕಲಿಸಬೇಕಾದ್ದು ಅಗತ್ಯ. ಮಕ್ಕಳಲ್ಲಿ ಸಾಧನೆ ಸ್ಫೂರ್ತಿ ತುಂಬಬೇಕು. ಇಂದಿನ ಯುವ ಜನತೆ ಸುಭಾಷ್ಚಂದ್ರ ಬೋಸ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು' ಎಂದರು.
ಹುಗ್ ಟೋಯ್ ಅವರು ಇಂಗ್ಲಿಷ್ನಲ್ಲಿ ರಚಿಸಿರುವ ಸುಭಾಷ್ಚಂದ್ರ ಬೋಸ್ ಅವರ ಜೀವನ ಚರಿತ್ರೆಯನ್ನು ಸಂಸ್ಥೆಯು ಬ್ರೈಲ್ ಲಿಪಿಯಲ್ಲಿ ರೂಪಿಸಿದ್ದು, ಈ ಪುಸ್ತಕವನ್ನು ಪ್ರೊ.ಮಾರ್ಟಿನ್ ಫಫ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಪ್ರೊ. ಮಾರ್ಟಿನ್ ಫಫ್, `ಹಣಕಾಸಿನ ಅಡೆತಡೆಗಳ ನಡುವೆಯೂ ಸಂಸ್ಥೆ ಅಂಧ ಮಕ್ಕಳಿಗಾಗಿ ಮಾಡುತ್ತಿರುವ ಸೇವಾಕಾರ್ಯ ಶ್ಲಾಘನೀಯ. ಅಂಧ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಂಸ್ಥೆ ಸಹಾಯ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಮಕ್ಕಳೂ ಜೀವನದಲ್ಲಿ ಮಹತ್ತನ್ನು ಸಾಧಿಸುವ ಧ್ಯೇಯ ಹೊಂದಬೇಕು' ಎಂದು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.