ಬೆಂಗಳೂರು : ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಎನ್ಡಿಎ ಮೈತ್ರಿಕೂಟವು ಗುರುವಾರ `ಭಾರತ್ ಬಂದ್~ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬುಧವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿದೆ.
ಬುಧವಾರ ಮಧ್ಯ ರಾತ್ರಿ ಕೆಲ ಕಿಡಿಗೆಡಿಗಳು ನಗರದ ವಿವಿಧ ಬಡಾವಣೆಗಳಲ್ಲಿ ಬಿಎಂಟಿಸಿ ಬಸ್ಗಳನ್ನು ಸುಟ್ಟುಹಾಕಿರುವುದು ವರದಿಯಾಗಿದೆ.
`ಬೆಂಗಳೂರಿನ ರೂಪೇನಾ ಅಗ್ರಹಾರ, ಕೆ.ಆರ್. ಪುರಂ ಹಾಗೂ ಐಟಿಐ ಫ್ಯಾಕ್ಟರಿ ಬಳಿಯಲ್ಲಿ ಗುರುವಾರ ಮುಂಜಾನೆಯಲ್ಲಿ ಕೆಲವು ಕಿಡಿಗೆಡಿಗಳು ಮೂರು ಬಿಎಂಟಿಸಿ ಬಸ್ಗಳನ್ನು ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಈ ಘಟನೆಯಿಂದಾಗಿ ಬಿಎಂಟಿಸಿ ಬಸ್ಗಳ ಕೆಲ ಸಿಬ್ಬಂದಿಗಳಿಗೆ ಗಾಯವಾಗಿದೆ. ಇದರೊಂದಿಗೆ ನಗರದ ವಿವಿಧೆಡೆಯಲ್ಲಿ 16 ದ್ವಿಚಕ್ರವಾಹನಗಳಿಗೆ ಹಾನಿಯನ್ನುಂಟು ಮಾಡಲಾಗಿದೆ.
ಇದರಿಂದಾಗಿ ಇಂದು ಬೆಳಿಗ್ಗೆಯಿಂದಲೇ ಕೆಎಸ್ಆರ್ಟಿಸಿ ಬಸ್ ಮತ್ತು ಬಿಎಂಟಿಸಿ ಬಸ್ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಪರಿಸ್ಥಿತಿಯನ್ನು ನೋಡಿಕೊಂಡು ಬಸ್ಗಳ ಸಂಚಾರವನ್ನು ಪುನರ್ ಆರಂಭಿಸಲಾಗುವುದು~ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಚೇರಿಗಳಿಗೆ ಹೋಗುವವವರು ಆಟೋಗಳಲ್ಲಿ ಹಾಗೂ ದ್ವಿಚಕ್ರಗಳಲ್ಲಿ ಹೋಗುವುದು ಕಂಡುಬಂದಿತು.
ಮುಂಜಾಗ್ರತ ಕ್ರಮವಾಗಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ- ಧಾರವಾಡ ಮತ್ತು ಹಾಸನ ಸೇರಿದಂತೆ ರಾಜ್ಯದ ಕೆಲವು ನಗರಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.